ಬೆಂಗಳೂರು: 2021-2022ರ ಸಾಲಿನ ಎಸ್ಎಸ್ಎಲ್ಸ್ ಪರೀಕ್ಷೆ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟವಾಗಲಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 10 ನೇ ತರಗತಿ ಫಲಿತಾಂಶವನ್ನು ಪ್ರಕಟಿಸಲಿದ್ದು, ಮಧ್ಯಾಹ್ನ 1 ಗಂಟೆ ನಂತರ ಅಧಿಕೃತ ವೆಬ್ಸೈಟ್ ಆದ sslc.karnataka.gov.in ನಲ್ಲಿ ಲಭ್ಯವಿರಲಿದೆ. ಮಧ್ಯಾಹ್ನ ಶಿಕ್ಷಣ ಸಚಿವ ನಾಗೇಶ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಕರ್ನಾಟಕದಲ್ಲಿ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. ಈ ಮೊದಲು ಮೇ 15ರಂದು ಫಲಿತಾಂಶ ಪ್ರಕಟಿಸುವುದಾಗಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಚಿಂತನೆ ನಡೆಸಿತ್ತು. ಆದರೆ ರಜೆಗಳು ಸಾಲುಸಾಲಾಗಿ ಬಂದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆ ತಡವಾಯಿತು. ರಾಜ್ಯದ ಸುಮಾರು 234 ಮೌಲ್ಯಮಾಪನ ಕೇಂದ್ರಗಳಲ್ಲಿ 63,796 ಶಿಕ್ಷಕರು ಮೌಲ್ಯಮಾಪನದಲ್ಲಿ ಪಾಲ್ಗೊಂಡಿದ್ದರು. ರಾಜ್ಯದ 3,446 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 15,387 ಶಾಲೆಗಳ 8.73 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದರು.
ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟು ಅಂಕಗಳ ಕೊರತೆ ಹೊಂದಿರುವ ವಿದ್ಯಾರ್ಥಿಗಳಿಗೆ ಶೇ 10ರಷ್ಟು ಗ್ರೇಸ್ ಮಾರ್ಕ್ಸ್ ಕೊಡಲು ಸರ್ಕಾರ ನಿರ್ಧರಿಸಿದೆ. ಮೂರು ವಿಷಯಗಳಲ್ಲಿ ಪಾಸಾಗಿರುವ ವಿದ್ಯಾರ್ಥಿಗಳು, ಒಂದು ವೇಳೆ ಉಳಿದ ಮೂರು ವಿಷಯಗಳಲ್ಲಿ ಕಡಿಮೆ ಅಂಕ ಪಡೆದು, ಫೇಲ್ ಆಗುವ ಪರಿಸ್ಥಿತಿ ಅನುಭವಿಸುತ್ತಿದ್ದರೆ ಮಾತ್ರ ಕೃಪಾಂಕ ಸಿಗುತ್ತದೆ. ಜೂನ್ 4 ನೇ ವಾರದಲ್ಲಿ ಪೂರಕ ಪರೀಕ್ಷೆ ನಡೆಯಲಿದೆ.
