ಹುಬ್ಬಳ್ಳಿ: ಮುಖ್ಯಮಂತ್ರಿ ಸ್ಥಾನ ನೀಡಲು ₹2,500 ಕೋಟಿ ನೀಡುವಂತೆ ದೆಹಲಿ ಮೂಲದವರು ಬೇಡಿಕೆ ಇಟ್ಟಿದ್ದರು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪದ ಕುರಿತು ಭ್ರಷ್ಟಾಚಾರ ನಿಗ್ರಹ ದಳದ ತನಿಖೆ ಅಷ್ಟೇ ಬಹಳ ಸಮಗ್ರವಾಗಿ ತನಿಖೆ ನಡೆಯಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಆಗಬೇಕಾದರೆ ₹2,500 ಕೋಟಿ, ಮಂತ್ರಿ ಆಗಬೇಕಾದರೆ ₹100 ಕೋಟಿ ಕೊಡಬೇಕು ಎಂದು ಯತ್ನಾಳ ಹೇಳಿದ್ದಾರೆ. ಅವರು ಸಾಮಾನ್ಯ ವ್ಯಕ್ತಿಯಲ್ಲ. ಸಂಸದರೂ, ಕೇಂದ್ರ ಸಚಿವರೂ ಆಗಿದ್ದವರು. ಅವರ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಬಾರದು. ಈ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆ ಆಗಬೇಕು ’ ಎಂದು ಒತ್ತಾಯಿಸಿದರು.
ಇಡೀ ಜಗತ್ತೇ ಬೆಚ್ಚಿ ಬೀಳುವ ಸುದ್ದಿಯಾಗಿದ್ದು ಬಿಜೆಪಿಗೆ ಬದ್ಧತೆ ಇದ್ದರೇ ಸಮಗ್ರ ತನಿಖೆಯಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಈ ಸರ್ಕಾರ ಹುಟ್ಟಿದ್ದೇ ಶಾಸಕರನ್ನ ಖರೀದಿ ಮಾಡುವ ಮೂಲಕ ಭ್ರಷ್ಟಾಚಾರಲ್ಲಿ ಹುಟ್ಟಿತು.
ಬಿಜೆಪಿ ಸರ್ಕಾರದಲ್ಲಿ ಪಿಎಸ್ಐ, ತಹಶೀಲ್ದಾರ್, ಲೋಕೋಪಯೋಗಿ ಇಲಾಖೆ ಸೇರಿದಂತೆ ಎಲ್ಲ ಹುದ್ದೆಗಳಿಗೂ ಇಷ್ಟೆಂದು ದರ ನಿಗದಿ ಮಾಡಲಾಗಿದೆ. ಈ ಹಿಂದೆ ಸಿ.ಎಸ್ ಶಿವಳ್ಳಿ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಅವರನ್ನು ಖರೀದಿಗೆ ಮುಂದಾಗಿದ್ದರು ಎಂದ ಕಿಡಿ ಕಾರಿದರು.
ಮುಖ್ಯಮಂತ್ರಿ, ಮಂತ್ರಿ ಹುದ್ದೆಗೂ ದರ ನಿಗದಿ ಮಾಡಿರುವುದನ್ನು ಶಾಸಕ. ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಎಸಿಬಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದರು.
ಶಾಸಕ ಅಬ್ಯಯ್ಯಾ ಪ್ರಸಾದ್, ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ, ಮುಂತಾದವರಿದ್ದರು.
