ನವದೆಹಲಿ: ದೇಶದ ಅನ್ನದಾತರಿಗೋಸ್ಕರ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, ಇದೀಗ ರಸಗೊಬ್ಬರ ಸಬ್ಸಡಿಯಲ್ಲಿ ದಾಖಲೆಯ ಪ್ರಮಾಣದ ಏರಿಕೆ ಮಾಡಿದೆ. ಹೀಗಾಗಿ ರಸಗೊಬ್ಬರಕ್ಕಾಗಿ ರೈತರು ಹೆಚ್ಚಿನ ಹಣ ನೀಡಬೇಕಾಗಿಲ್ಲ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದೀಗ ಡಿಎಪಿ ಗೊಬ್ಬರದ ಮೇಲಿನ ಸಬ್ಸಿಡಿ ಬರೋಬ್ಬರಿ ಶೇ. 140ಕ್ಕೆ ಏರಿಕೆಯಾಗಿದೆ. ಇದಕ್ಕೋಸ್ಕರ ಕೇಂದ್ರ ಸರ್ಕಾರ 14,775 ಕೋಟಿ ರೂ. ಹೆಚ್ಚುವರಿ ಖರ್ಚು ಮಾಡಲಿದೆ.ಕಳೆದ ಕೆಲ ದಿನಗಳ ಹಿಂದೆ ರಸಗೊಬ್ಬರ ಬೆಲೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬರುತ್ತದೆ ಎಂಬ ಮಾತು ಕೇಳಿ ಬಂದಿದ್ದವು. ಇದರ ವಿರುದ್ಧ ವಿಪಕ್ಷಗಳು ವಾಗ್ದಾಳಿ ಸಹ ನಡೆಸಿದ್ದವು. ಇದೀಗ ರಸಗೊಬ್ಬರ ಬೆಲೆಯಲ್ಲಿ ಏರಿಕೆಯಾಗಿದೆ. ಆದರೆ, ಇದರಿಂದ ರೈತರಿಗೆ ಯಾವುದೇ ರೀತಿಯ ತೊಂದರೆ ಯಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಡಿಎಪಿ ಪ್ರತಿ 50 ಕೆಜಿ ಚೀಲದ ಬೆಲೆ 1200 ರೂ. ಇದ್ದು, ಅದರ ಬೆಲೆ ಇನ್ಮುಂದೆ 1900 ಆಗಲಿದೆ. ಆದರೆ, ಇದೀಗ ಕೇಂದ್ರ ಸಬ್ಸಿಡಿ ಬೆಲೆ ಶೇ.140ಕ್ಕೆ ಏರಿಕೆ ಮಾಡಿರುವ ಕಾರಣ ಅವರಿಗೆ ರಿಯಾಯತಿ ದೊರೆಯಲಿದೆ. ಡಿಎಪಿ ರಸಗೊಬ್ಬರದಲ್ಲಿ ಬಳಕೆ ಮಾಡಲಾಗುವ ಕೆಲವೊಂದು ಕಚ್ಚಾ ವಸ್ತುಗಳ ಬೆಲೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದ್ದ ಕಾರಣ ಕಂಪನಿಗಳು ಇದರ ಬೆಲೆ ಏರಿಕೆ ಮಾಡುವುದಾಗಿ ಹೇಳಿ ಕೊಂಡಿದ್ದವು.ಕಳೆದ ವರ್ಷ ಡಿಎಪಿ ಬೆಲೆ 1700 ಆಗಿತ್ತು. ಆದರೆ, ಕೇಂದ್ರ ಸರ್ಕಾರ 500 ರೂ ಸಬ್ಸಿಡಿ ನೀಡಿತ್ತು. ಹೀಗಾಗಿ ರೈತರಿಗೆ 1200 ರೂ.ಗೆ ಲಭ್ಯವಾಗುತ್ತಿತ್ತು. ಇದೀಗ ಡಿಎಪಿ ಬೆಲೆ ಪ್ರತಿ ಚೀಲಕ್ಕೆ 1,900 ಆಗಿದೆ. ಆದರೆ ಈಗಲೂ 1,200ರೂಗೆ ಸಿಗಲಿದೆ.
