ಹುಬ್ಬಳ್ಳಿ: ತಾಲೂಕಿನ ವರೂರ ಗ್ರಾಮದಲ್ಲಿ ಮಾ. 5ರಂದು ಮಧ್ಯಾಹ್ನ
1 ಗಂಟೆಗೆ ಶ್ರೀ ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಗ್ರಾಮದ ನಲವತ್ತವಾಡ ವೀರೇಶ್ವರ ಮಠದಿಂದ ಉಜ್ಜಯನಿ ಪ್ರೌಢಶಾಲೆವರೆಗೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 7 ಗಂಟೆಗೆ ಉಜ್ಜಯನಿ ಜಗದ್ಗುರು ಪ್ರೌಢಶಾಲೆ ಆವರಣದಲ್ಲಿ ಧರ್ಮಸಭೆ ಜರುಗಲಿದೆ. ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ನರಗುಂದ ಪಂಚಗೃಹ ಹಿರೇಮಠದ ಸ್ಥಳೀಯ ಶಾಖೆಯ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಸಮ್ಮುಖ ವಹಿಸುವರು. ಕಲಾದಗಿಯ ಶ್ರೀ ಗಂಗಾಧರ ಶಿವಾಚಾರ್ಯರು, ಶ್ರೀ ರಾಜಶೇಖರ ಶಿವಾಚಾರ್ಯರು, ಶ್ರೀ ವಿರೂಪಾಕ್ಷಯ್ಯ ಶಿವಾಚಾರ್ಯರು, ಶ್ರೀಕ್ಷೇತ್ರ ನವಗ್ರಹತೀರ್ಥದ ಸ್ವಸ್ತಿ ಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಭಾಗವಹಿಸುವರು. ಅಡ್ಡಪಲ್ಲಕ್ಕಿ ಮಹೋತ್ಸವ ನಿಮಿತ್ತ ಮಾ. 7ರಂದು ವರೂರಿನ ಶ್ರೀ ಚರಗುರುಮೂರ್ತೇಶ್ವರ ನಾಟ್ಯ ಸಂಘದಿಂದ ‘ಕಲಿಯುಗದಲ್ಲಿ ಗರ್ಜಿಸಿದ ಕರ್ಣಾರ್ಜುನ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
