ಹುಬ್ಬಳ್ಳಿ: ನೇತ್ರಚಿಕಿತ್ಸೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಜನಮಾನಸದಲ್ಲಿ ಅಚ್ಚಾಗಿ ಉಳಿದುಕೊಂಡಿರುವ ಎಂ.ಎಂ. ಜೋಶಿ ನೇತ್ರವಿಜ್ಞಾನ ಸಂಸ್ಥೆಯಿಂದ ಇಲ್ಲಿನ ಉಣಕಲ್-ಹೊಸೂರು ರಸ್ತೆಯಲ್ಲಿ ನಿರ್ಮಿಸಲಾದ ಎರಡನೇ ನೇತ್ರ ಚಿಕಿತ್ಸಾ ಕೇಂದ್ರ ‘ಐಸಿರಿ’ ಉದ್ಘಾಟನಾ ಸಮಾರಂಭವು ಮಾ. 1ರಂದು ಸಂಜೆ 4:45 ಗಂಟೆಗೆ ದುರ್ಗಾ ಸ್ಪೋರ್ಟ್ಸ್ ಮೈದಾನದಲ್ಲಿ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರಾದ ಡಾ ಶ್ರೀನಿವಾಸ ಜೋಶಿ ಹಾಗೂಡಾ. ಎ.ಎಸ್. ಗುರುಪ್ರಸಾದ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಕಳೆದ 57 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಎಂ.ಎಂ. ಜೋಶಿ ಆಸ್ಪತ್ರೆಯು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಜನರಿಗೆ ಉತ್ತಮ ನೇತ್ರ ಚಿಕಿತ್ಸೆ ನೀಡುತ್ತಿದೆ. ಅದರಂತೆ ಇದೀಗ 60ಸಾವಿರ ಚದುರ ಅಡಿ ವಿಸ್ತೀರ್ಣದಲ್ಲಿ ಐದು ಮಹಡಿಯ ಭವ್ಯ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿ ರೋಗಿಗಳಿಗೆ ಅನುಕೂಲವಾಗುವ ದಿಸೆಯಲ್ಲಿ ಕ್ಯಾಟರಾಕ್ಟ್, ಕಾರ್ನಿಯಾ, ರಿಫ್ರಾಕ್ಟಿವ್ ಶಸ್ತ್ರಚಿಕಿತ್ಸೆ, ಅಕ್ಷಿಪಟಲ ವಿಭಾಗ, ಗ್ಲುಕೋಮಾ ವಿಭಾಗ, ಚಿಕ್ಕ ಮಕ್ಕಳ ನೇತ್ರಚಿಕಿತ್ಸೆ, ಮೆಳ್ಳಗಣ್ಣು ವಿಭಾಗ ಸೇರಿದಂತೆ ಮುಂತಾದ ವಿಭಾಗ ಹೊಂದಿದೆ. ಜೊತೆಗೆ ನಾಲ್ಕನೇ ಮಹಡಿಯಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸಂಕೀರ್ಣ, ನಾಲ್ಕು ಮಾಡ್ಯುಲರ್ ಆಪರೇಷನ್ ಥಿಯೇಟರ್, ಚಸ್ಮಾ ನಂಬರ್ ನಿವಾರಿಸುವ ರಿಫ್ರಾಕ್ಟಿವ್ ಸರ್ಜರಿಯ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ಸಂದರ್ಭದಲ್ಲಿ ದೇಶದ ಮೂರನೇ ಹಾಗೂ ರಾಜ್ಯದಲ್ಲಿಯೇ ಮೊಟ್ಟಮೊದಲ ಝಡ್ 8 ತಂತ್ರಜ್ಞಾನ ಉದ್ಘಾಟನೆ ನಡೆಯಲಿದೆ ಎಂದರು.
ಉದ್ಘಾಟನಾ ಸಮಾರಂಭಕ್ಕೆ ಉಪ ರಾಷ್ಟ್ರಪತಿ ಜಗದೀಪ ಧನಕರ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಸಂತೋಷ ಲಾಡ, ಎಚ್.ಕೆ. ಪಾಟೀಲ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಶ್ರೀನಿವಾಸ ಮಾನೆ, ಎಂ.ಆರ್. ಪಾಟೀಲ, ಪಾಲಿಕೆ ಮಹಾಪೌರ ವೀಣಾ ಬರದ್ವಾಡ ಸೇರಿದಂತೆ ಅನೇಕ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಶ್ರೀನಿವಾಸ ಜೋಶಿ, ಡಾ. ಆರ್. ಕೃಷ್ಣಪ್ರಸಾದ, ಡಾ. ಎಚ್.ವಿ. ಸತ್ಯಮೂರ್ತಿ ಇನ್ನಿತರರಿದ್ದರು.