ಹುಬ್ಬಳ್ಳಿ; ಕೊರೊನಾ ೨ ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿನ್ನೆಯಿಂದ ಮೇ ೪ ರವರೆಗೆ ರಾತ್ರಿ ೯ ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರೆಗೆ ಕಠಿಣ ರಾತ್ರಿ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿಯೂ ಕಠಿಣ ಕ್ರಮ ಜಾರಿಯಾಗಿದ್ದರಿಂದ ಅಂಗಡಿ-ಮುಂಗಟ್ಟು, ಮಾಲ್, ಥಿಯೇಟರ್ ಗಳನ್ನು ಸೇರಿದಂತೆ ಬಂದ್ ಮಾಡಲು ಇಂದು ಬೆಳಿಗ್ಗೆಯಿಂದ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಇನ್ನೂ ಶಾಲಾ-ಕಾಲೇಜು, ಉದ್ಯಾನವನ, ಹೊಟೇಲ್, ಬಾರ್, ರೆಸ್ಟೋರೆಂಟ್, ಸೇರಿದಂತೆ ವಿವಿಧೆಡೆ ಕಟ್ಟು ನಿಟ್ಟಿನ ಆದೇಶವನ್ನು ಜಿಲ್ಲಾಧಿಕಾರಿ ಹಾಗೂ ಕಮೀಷನರ್ ಅವರ ನೇತೃತ್ವದಲ್ಲಿ ನೀಡಲಾಯಿತು.
ಹುಬ್ಬಳ್ಳಿಯ ಜನತಾಬಜಾರ, ದುರ್ಗದಬೈಲ್, ಕೇಶ್ವಾಪೂರ, ಸಿಬಿಟಿ, ಹಳೇಹುಬ್ಬಳ್ಳಿ, ಧಾರವಾಡದ ಸಿಬಿಟಿ, ಸೂಪರ್ ಮಾರ್ಕೆಟ್ ಸೇರಿದಂತೆ ವಿವಿಧೆಡೆ ಪೊಲೀಸರು ಬೆಳ್ಳಂ ಬೆಳಿಗ್ಗೆಯಿಂದಲ್ಲೇ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಅಂಗಡಿ-ಮುಂಗಟ್ಟುಗಳನ್ನು ತೆರೆಯದಂತೆ ವ್ಯಾಪಾರಸ್ಥರಿಗೆ ಸೂಚನೆ ನೀಡಿದರು. ಅಲ್ಲದೇ ಈ ವೇಳೆ ಸಾರ್ವಜನಿಕರು ತಪ್ಪದೇ ಮಾಸ್ಕ್ ಧರಿಸಿ ಎಂದು ಎಚ್ಚರಿಕೆ ನೀಡಿದರು.
ನಿನ್ನೆ ರಾತ್ರಿಯಿಂದ ಕಠಿಣಾತಿ ಕಠಿಣ ಕ್ರಮ ಜಾರಿಯಾಗಿದ್ದು, ನಿನ್ನೆ ರಾತ್ರಿ ೯ ಗಂಟೆಯ ನಂತರ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದರಿಂದ ರಾತ್ರಿ ಹುಬ್ಬಳ್ಳಿ-ಧಾರವಾಡ ಪ್ರಮುಖ ರಸ್ತೆಗಳು ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು.
ಮೊದಲನೇ ಕೊರೊನಾ ಅಟ್ಟಹಾಸ ಬೆನ್ನಲ್ಲೇ ಕೊರೊನಾ ೨ ನೇ ಅಲೆ ತನ್ನ ರಕ್ಕಸ ನರ್ತನವನ್ನು ತೋರಿಸುತ್ತಿದ್ದು, ಪ್ರತಿನಿತ್ಯ ರಾಜ್ಯದಲ್ಲಿ ೨೦ ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ಗಳು ಹಾಗೂ ಸಾವು, ನೋವುಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವರ್ಷದ ಬಳಿಕ ಮತ್ತೇ ಕೋವಿಡ್ ಕಠಿಣ ಮಾರ್ಗಸೂಚಿ ಹೊರಡಿಸಿದ್ದು, ಸಾರ್ವಜನಿಕರು ಮತ್ತೇ ನಲುಗುವಂತಾಗಿದೆ.
ರಸ್ತೆಗಿಳಿದ ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್ :
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ರಾತ್ರಿ ಕಠಿಣ ನಿಯಮ ಜಾರಿ ಇರುವುದರಿಂದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಅವರು ಅವಳಿ ನಗರದಲ್ಲಿ ಸಂಚರಿಸಿ ಸಾರ್ವಜನಿಕರು ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬಾರದಂತೆ ಜಾಗೃತಿ ಮೂಡಿಸಿದರು.
ಅಲ್ಲದೇ ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರು ಕೈಜೋಡಿಸಿ, ಸರ್ಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಕೇಸ್ ನಂಬರ್ …