ಬೆಳಗಾವಿ:ಬೆಳಗಾವಿ ಸೇರಿದಂತೆ ಇಡೀ ರಾಜ್ಯವೇ ಬೆಚ್ಚಿ ಬಿಳಿಸಿದ್ದ ಇಲ್ಲಿನ ಕುವೆಂಪು ನಗರದ ತ್ರಿವಳಿ ಕೊಲೆ ಆರೋಪಿ ಪ್ರವೀಣ್ ಭಟ್ ಗೆ ಧಾರವಾಡ ಹೈಕೋರ್ಟ್ ನಿರ್ದೋಷಿ ಎಂದು ತೀರ್ಪು ಹೊರಡಿಸಿದೆ.
ತ್ರಿವಳಿ ಕೊಲೆ ಪ್ರಕರಣವನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ.
ಬಟ್ಟೆ ವ್ಯಾಪಾರಿಯ ಮನೆಗೆ ನುಗ್ಗಿ ಗೃಹಿಣಿ ಮತ್ತು ಇಬ್ಬರು ಮಕ್ಕಳ ಕಗ್ಗೊಲೆ ಮಾಡಿದ್ದ ಯುವಕ. ಈ ಪ್ರಕರಣದ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ಹೈಕೋರ್ಟ್ ಧಾರವಾಡ ಪೀಠ ಆದೇಶ ಹೊರಡಿಸಿದೆ. ಇದಕ್ಕಿಂತ ಪೂರ್ವದಲ್ಲಿ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದ್ದ ಆದೇಶ ತಿರಸ್ಕರಿಸಿರುವ ಹೈಕೋರ್ಟ್ ಜೂನ್ 21 ರಂದು ಪ್ರವೀಣ್ ಭಟ್ ನಿರ್ದೋಷಿ ಎಂದು ತೀರ್ಪು ನೀಡಿತ್ತು. ನ್ಯಾಯಾಧೀಶರಾದ ಕೆ.ಎಸ್. ಮುದಗಲ್, ಎಂಜಿಎಸ್ ಕಮಲ್ ಈ ತೀರ್ಪು ನೀಡಿದ್ದಾರೆ.
ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ತ್ರಿವಳಿ ಕೊಲೆ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು. ಇದಾದ ಬಳಿಕ ಕೋರ್ಟ್ಗೆ ಎಪಿಎಂಸಿ ಠಾಣೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ನಂತರ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುಧೀರ್ಘ ವಿಚಾರಣೆ ನಡೆಸಿ 16 ಎಪ್ರಿಲ್ 2018ರಂದೇ ಪ್ರವೀಣ್ ಭಟ್ಗೆ ಜೀವಾವಧಿ ಶಿಕ್ಷೆ ಸಹ ವಿಧಿಸಿ ತೀರ್ಪು ನೀಡಿತ್ತು.
*ಘಟನೆ ಹಿನ್ನೆಲೆ*
ಬೆಳಗಾವಿಯ ಕುವೆಂಪು ನಗರದಲ್ಲಿ 2015 ಆಗಸ್ಟ್ 16 ರಂದು ನಸುಕಿನ ಜಾವ ತಾಯಿ ಇಬ್ಬರು ಮಕ್ಕಳ ಕೊಲೆ ನಡೆದಿತ್ತು. ಕೊಲೆಯಾದವರ ಪೈಕಿ ತಾಯಿ ರೀನಾ ಮಾಲಗತ್ತಿ ಮಗ ಆದಿತ್ಯ ಮಾಲಗತ್ತಿ, ಮಗಳು ಸಾಹಿತ್ಯ ಮಾಲಗತ್ತಿಯನ್ನು ಭೀಕರವಾಗಿ ಕೊಲೆಗೈಯ್ಯಲಾಗಿತ್ತು. 24 ಗಂಟೆಯಲ್ಲೇ ಎಪಿಎಂಸಿ ಪೊಲೀಸರು ಆರೋಪಿತ ಪ್ರವೀಣ್ ಭಟ್ ನನ್ನು ಬಂಧಿಸಿದ್ದರು. ತ್ರಿವಳಿ ಕೊಲೆಗೆ ರೀನಾ ಹಾಗೂ ಪ್ರವೀಣ್ ಭಟ್ ನಡುವಿನ ಅನೈತಿಕ ಸಂಬಂಧವೇ ಕಾರಣವಾಗಿತ್ತು.
ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರವೀಣ್ ಏಕಾಂಗಿಯಾಗಿ ತಾಯಿ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಸಂಗತಿ ತನಿಖೆ ವೇಳೆ ಬಹಿರಂಗಗೊಂಡಿತ್ತು.
ಉತ್ತರ ಕನ್ನಡ ಜಿಲ್ಲೆ ಮೂಲದ ಪ್ರವೀಣ್ ತನ್ನ ಪಾಲಕರೊಂದಿಗೆ ಕಳೆದ ಹಲವು ವರ್ಷಗಳಿಂದ ಬೆಳಗಾವಿಯ ಕುವೆಂಪು ನಗರದಲ್ಲಿ ವಾಸವಾಗಿದ್ದನು. ಕೊಲೆ ಮಾಡುವ ಮುಂಚಿತವಾಗಿ ಒಂದು ವರ್ಷದ ಹಿಂದೆ ರೀನಾ ಹಾಗೂ ಪ್ರವೀಣ್ ನಡುವೆ ಸ್ನೇಹ ಅಂಕುರಿಸಿತ್ತು.
ಜವಳಿ ವ್ಯಾಪಾರಿಯಾಗಿದ್ದ ಆಕೆಯ ಗಂಡ ರಿತೇಶ ಮಾಲಗತ್ತಿ, ಉದ್ಯಮದ ಸಂಬಂಧ ಕೆಲವೊಮ್ಮೆ ಎರಡ್ಮೂರು ದಿನ ಮನೆಗೆ ಬರುತ್ತಿರಲಿಲ್ಲ. ಈ ವೇಳೆ ರೀನಾ ಮಾಲಗತ್ತಿ ಪ್ರವೀಣ್ನನ್ನು ಮನೆಗೆ ಆಹ್ವಾನಿಸಿ, ಅನೈತಿಕ ಚುಟುವಟಿಕೆಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದಳು. ರಿತೇಶ ಮನೆಯಲ್ಲಿ ಇಲ್ಲದ ಸಮಯದಲ್ಲಿ ಹಲವು ಸಲ ರೀನಾ ಭೇಟಿಗೆ ಮನೆಗೆ ಹೋಗುತ್ತಿದ್ದ ಪ್ರವೀಣ್ ಒಮ್ಮೆಯೂ ಮುಂಬಾಗಿಲಿನಿಂದ ಹೋಗಿಲ್ಲ. ಹಗ್ಗ ಏರಿ ಹೋಗಿಯೇ ರೀನಾನನ್ನು ಭೇಟಿ ಆಗುತ್ತಿದ್ದನು. ಹತ್ಯೆ ಘಟನೆ ನಡೆದ ದಿನ ರಾತ್ರಿ ಎರಡು ಸಲ ಪ್ರವೀಣ್ ರೀನಾ ಮನೆಗೆ ಹೋಗಿದ್ದನು ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ದೃಢಪಟ್ಟಿತ್ತು.
2015 ಆ. 16ರಂದು ಬೆಳಗಿನ ಜಾವ ನಡೆದ ತ್ರಿವಳಿ ಕೊಲೆ ಪ್ರಕರಣದ ಸಂಬಂಧ ಪ್ರವೀಣ್ ಭಟ್ನನ್ನು ಬಂಧಿಸಿ, ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗಿತ್ತು. ಆದರೆ ಈಗ ಆತ ನಿರ್ದೋಶಿ.