ಹುಬ್ಬಳ್ಳಿಯಲ್ಲಿ ಭಾರೀ ಮಳೆ- ಧರಗುಳಿದ ಮರಗಳು, ಮನೆ,ಮಳಿಗೆಗೆ ನೀರು,ಜನಜೀವನ ಅಸ್ತವ್ಯಸ್ತ
ಹುಬ್ಬಳ್ಳಿ; ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ಅಬ್ಬರದ ಮಳೆ ಸುರಿದಿದೆ. ಈ ಮೂಲಕ ಮುಂಗಾರು ಪ್ರವೇಶವಾಗಿದ್ದು ಮೊದಲ ದಿನವೇ ತನ್ನ ಆರ್ಭಟ ಪ್ರದರ್ಶಿಸಿದೆ. 2 ಗಂಟೆಗೂ ಅಧಿಕ ಕಾಲ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಗಾಳಿಗೆ 70ಕ್ಕೂ ಹೆಚ್ಚು ಮರ, ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಆಸ್ತಿ ಹಾನಿಯಾಗಿದೆ. ಹತ್ತಾರು ವಾಹನಗಳು ಜಖಂಗೊಂಡಿವೆ.
*76ಕ್ಕೂ ಹೆಚ್ಚು ಮರ*
ಸಂಜೆ 4ರ ಸುಮಾರಿಗೆ ಸಣ್ಣದಾಗಿ ಶುರುವಾದ ಮಳೆ ಕೆಲವೇ ಹೊತ್ತಿನಲ್ಲೇ ರಭಸ ಪಡೆಯಿತು. ಜತೆಗೆ ಬಿರುಗಾಳಿ ಸಮೇತ ಮಳೆ ಸುರಿಯಲು ಆರಂಭವಾಗಿದ್ದರಿಂದ ಒಂದೇ ತಾಸಿನಲ್ಲಿ ಜನಜೀವನವನ್ನೇ ಅಸ್ತವ್ಯಸ್ತವನ್ನಾಗಿ ಮಾಡಿತು. ಗಂಟೆಗೆ 40 ಕಿಮೀಗೂ ಜೋರಾದ ಗಾಳಿ ಬೀಸಿತು. ಇದರಿಂದ ವಿದ್ಯಾನಗರ, ಶಿರೂರು ಪಾರ್ಕ್, ನೃಪತುಂಗ ಬೆಟ್ಟ, ಶಕ್ತಿಕಾಲನಿ, ಸಂಗೊಳ್ಳಿ ರಾಯಣ್ಣ ನಗರ, ರವಿನಗರ, ದೈವಜ್ಞ ಕಲ್ಯಾಣ ಮಂಟಪ ಬಳಿ, ಕಾಳಿದಾಸ ನಗರ, ವೆಂಕಟೇಶವರ ಕಾಲನಿ, ಶಿಮ್ಲಾನಗರ, ಈಶ್ವರ ನಗರ, ಅಕ್ಷಯ ಕಾಲನಿ ಸೇರಿದಂತೆ ವಿವಿಧೆಡೆ 76ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದವು.
ಲಿಂಗರಾಜನಗರದ 3ನೇ ಕ್ರಾಸ್ ಬಳಿ ಬೃಹದಾಕಾರದ ಮರ ಧರೆಗುರುಳಿದ ಪರಿಣಾಮ ಕಾರು ಜಖಂಗೊಂಡಿದೆ. ಜತೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮರಗಳು ಉರುಳಿದ ಪರಿಣಾಮ 7ಕ್ಕೂ ಹೆಚ್ಚು ಕಾರು, 15ಕ್ಕೂ ಹೆಚ್ಚು ಬೈಕ್ ಜಖಂಗೊಂಡಿವೆ. ಮರ ಬಿದ್ದು ಎರಡು ಮನೆ ಜಖಂಗೊಂಡಿದ್ದು 2 ಮನೆಗಳು ಭಾಗಶಃ ಕುಸಿದಿವೆ.
ಸಾಯಿನಗರದ ವಾಯುಪುತ್ರ ಬಡಾವಣೆ, ಸಿದ್ದರಾಮೇಶ್ವರ ನಗರದ ಟಿಂಬರ್ ಯಾರ್ಡ್, ರಾಮಲಿಂಗೇಶ್ವರ ನಗರ, ನೇಕಾರ ನಗರ, ಆನಂದ ನಗರ ಸೇರಿದಂತೆ ವಿವಿಧೆಡೆ ತೆಗ್ಗು ಪ್ರದೇಶಗಳಲ್ಲಿರುವ 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.
*ಬಿಆರ್ಟಿಎಸ್ ಬಸಲ್ಲೂ ನೀರು*
ಧಾರಾಕಾರ ಮಳೆಯಿಂದ ಉಣಕಲ್ ಬಳಿಯಿರುವ ಶ್ರೀನಗರದ ಬಿಆರ್ಟಿಎಸ್ ಕಾರಿಡಾರ್ನಲ್ಲಿ ಮೊಳಕಾಳವರೆಗೂ ನೀರು ನಿಂತ ಪರಿಣಾಮ ಎರಡು ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ನಿಲ್ದಾಣದಲ್ಲಿ ನಿಂತಿದ್ದ ಬಿಆರ್ಟಿಎಸ್ ಬಸ್ನೊಳಗೂ ನೀರು ನುಗ್ಗಿತ್ತು. ಶ್ರೀನಗರ ಬಳಿ 1 ಗಂಟೆಗೂ ಹೆಚ್ಚು ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.
ಸಂಜೆ 6ರ ನಂತರ ಗಾಳಿಯ ಪ್ರಮಾಣ ತಗ್ಗಿತು. ಆದರೂ ರಾತ್ರಿವರೆಗೂ ಮಳೆ ಮಾತ್ರ ಅಬ್ಬರಿಸುತ್ತಲೇ ಇತ್ತು. ಮೂರ್ನಾಲ್ಕು ಗಂಟೆ ಕಾಲ ಸುರಿದ ಮಳೆಗೆ ನಗರದ ಪ್ರಮುಖ ಹಾಗೂ ಒಳರಸ್ತೆಗಳು ಜಲಾವೃತಗೊಂಡಿದ್ದವು. ಅದರಲ್ಲೂ ತಗ್ಗು ಪ್ರದೇಶದ ರಸ್ತೆಗಳೆಲ್ಲ ಪೂರ್ಣ ಪ್ರಮಾಣದಲ್ಲಿ ಜಲಾವೃತಗೊಂಡವು. ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಯಿತು. ಪಾಲಿಕೆ ಸಿಬ್ಬಂದಿ ಬಿದ್ದ ವಿದ್ಯುತ್ ಕಂಬಗಳ ತೆರವು ಕಾರ್ಯಾಚರಣೆ ಪ್ರಾರಂಭಿಸಿದರ.
ಕುಂದಗೋಳ, ನವಲಗುಂದ, ಅಣ್ಣಿಗೇರಿ ಸೇರಿದಂತೆ ಎಲ್ಲೆಡೆ ಕೆಲ ಕಾಲ ರಭಸದ ಮಳೆ ಸುರಿದ ಬಗ್ಗೆ ವರದಿಯಾಗಿದೆ.
*ಸ್ವಲ್ಪದರಲ್ಲಿಯೇ ಪಾರಾದ ವೈದ್ಯ*
ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ಕಾರಿನಲ್ಲಿ ಹೊರಟಿದ್ದ ಕಿಮ್ಸ… ವೈದ್ಯರೊಬ್ಬರು ಕೂದಲೆಳೆ ಅಂತರದಲ್ಲಿ ಅವಘಡದಿಂದ ಪಾರಾಗಿದ್ದಾರೆ. ಅವರ ಕಾರಿನ ಮೇಲೆ ಬೃಹತ್ ಮರವೊಂದು ಉರುಳಿದ್ದರಿಂದ ಅವರ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಜತೆಗೆ ಮನೆ ಮುಂದೆ ನಿಲ್ಲಿಸಿದ್ದ ಇನ್ನೊಂದು ಕಾರು ಮತ್ತು ಎರಡು ಬೈಕ್ಗಳು ಮರದ ಅಡಿ ಸಿಲುಕಿಕೊಂಡಿವೆ.
*ಬಿತ್ತನೆಗೆ ತಯಾರು*
ಧಾರವಾಡ: ಬಿತ್ತನೆ ಮಾಡಲು ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಗುರುವಾರ ಸುರಿದ ಮಳೆಯಿಂದ ಮಂದಹಾಸ ಮೂಡಿದೆ. ಈ ಮೂಲಕ ಮುಂಗಾರು ಹಂಗಾಮು ಅಧಿಕೃತವಾಗಿ ಶುರುವಾಗಿದೆ.
ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಮುಂಗಾರು ಬೆಳೆಗಾಗಿ ರೈತರು ಸಂಪೂರ್ಣ ಸಜ್ಜಾಗಿದ್ದರು. ಭೂಮಿ ಮಳೆಯಿಂದಾಗಿ ಹಸಿಯಾಗಬೇಕಿತ್ತಷ್ಟೇ. ಇದೀಗ ಧಾರವಾಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಈ ಬಾರಿ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ಬಿತ್ತನೆಯಾಗುವ ಸಾಧ್ಯತೆಗಳೂ ಇವೆ.
ಹವಾಮಾನ ವೈಪರೀತ್ಯದಿಂದ ಕಳೆದ ಎರಡು ವಾರಗಳ ಹಿಂದೆ ಎರಡು ದಿನ ಮಳೆಯಾಗಿತ್ತು. ಅದಾದ ನಂತರ ಉರಿ ಬಿಸಿಲು ಮುಂದುವರಿದು ಧಾರವಾಡ ಹಾಗೂ ಇತರೆ ಭಾಗಗಳಲ್ಲಿ ಸೆಖೆಯ ಅನುಭವ. ಗುರುವಾರವೂ ಬೆಳಗ್ಗೆಯಿಂದ ಮಧ್ಯಾಹ್ನ ವರೆಗೂ ತೀವ್ರ ಬಿಸಿಲು ವಾತಾವರಣವಿತ್ತು. ಸಂಜೆ 4ರ ಹೊತ್ತಿಗೆ ಏಕಾಏಕಿ ಗುಡುಗು ಸಿಡಿಲಿನೊಂದಿಗೆ ಧೋ ಎಂದು ಒಂದು ಎರಡು ಕಾಲ ಮಳೆ ಸುರಿಯಿತು.