ಬೆಂಗಳೂರು: ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಧಾರವಾಡದ ಬಾಡ ಗ್ರಾಮದ ಬಳಿ ನಡೆದ ದುರ್ಘಟನೆಯಲ್ಲಿ ಮಡಿದ 9 ಜನರ ಕುಟುಂಬಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುವುದು. ಈ ಅಪಘಾತ ಅತ್ಯಂತ ದುರದೃಷ್ಟಕರ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಬಾಡ ರಸ್ತೆಯಲ್ಲಿ ಶುಕ್ರವಾರ ಮಧ್ಯರಾತ್ರಿ ಅಪಘಾತ ಸಂಭವಿಸಿದೆ. ವಧುವಿನ ಕಡೆಯವರನ್ನು ಕರೆದುಕೊಂಡು ಬಂದಿದ್ದ ಕ್ರೂಸರ್ ಇದಾಗಿದ್ದು, ಅದೇ ಕ್ರೂಸರ್ನಲ್ಲಿ ಜನರು ನಿಗದಿ ಗ್ರಾಮಕ್ಕೆ ಹೊರಟಿದ್ದರು. ನಿಶ್ಚಿತಾರ್ಥ ಕಾರ್ಯದ ಬಳಿಕ ಕಲ್ಯಾಣ ಮಂಟಪಕ್ಕೆಂದು ನಿಗದಿಗೆ ಹೊರಟಿದ್ದಾಗ ಅಪಘಾತವಾಗಿತ್ತು. ಇದರಿಂದಾಗಿ ಇಡೀ ಕರುನಾಡು ಶೋಕ ಸಾಗರದಲ್ಲಿತ್ತು.
