ಉಡುಪಿ : ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಿದರೆ ಸ್ವಾಗತ, ಯಾರು ಬೇಕಾದರೂ ಕರ್ನಾಟಕದಿಂದ ಸ್ಪರ್ಧಿಸಬಹುದು. ಅವರ ಅಜ್ಜಿ, ಅಮ್ಮನನ್ನು ಸ್ವಾಗತಿಸಿದ್ದೇವೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧಿಸಿದ್ದರು, ನಂತರ ಸೋನಿಯಾಗಾಂಧಿ ಕೂಡಾ ಕರ್ನಾಟಕದಿಂದ ಸ್ಪರ್ಧೆ ಮಾಡಿದ್ದರು, ಈಗ ಪ್ರಿಯಾಂಕ ಸ್ಪರ್ಧಿಸಿದರೂ ಸ್ವಾಗತ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಇವತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ. ಉತ್ತರ ಪ್ರದೇಶದಲ್ಲೂ ಹಾಗೇ ಆಗಿತ್ತು, ಅಲ್ಲಿ ಕಾಂಗ್ರೆಸ್ನ್ನು ಮೇಲೆತ್ತಲು ಪ್ರಿಯಾಂಕ ಹೋಗಿದ್ದರು. ಈಗ ಅದೇ ರೀತಿ ಕರ್ನಾಟಕಕ್ಕೆ ಬರುತ್ತಿರಬಹುದು, ಅದು ಒಳ್ಳೆಯ ಬೆಳವಣಿಗೆ ಖಂಡಿತಾ ಬರಲಿ ಎಂದು ಶೋಭಾ ಹೇಳಿದರು. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ, ಆದ್ದರಿಂದ ಪ್ರಿಯಾಂಕ ಅವರು ಹಿಂಬಾಗಿಲಿನಿಂದ ಸಂಸತ್ಗೆ ಬರುವ ಬದಲು ಲೋಕಸಭೆಗೆ ಸ್ಪರ್ಧಿಸಿ ಬಂದರೆ ಉತ್ತಮ ಎಂದು ಅವರು ಸಲಹೆ ಮಾಡಿದರು.