ಹುಬ್ಬಳ್ಳಿ: ಪರಿಶ್ರಮ ಮತ್ತು ಶ್ರದ್ಧೆ ಇದ್ದರೆ ಏನನ್ನಾದರೂ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಉದಾಹರಣೆ ಉದ್ಯಮಿ ದಿ. ಡಾ. ಆರ್.ಎನ್. ಶೆಟ್ಟಿ ಅವರಾಗಿದ್ದರು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ -ಧಾರವಾಡ ಬಂಟರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಆರ್.ಎನ್. ಶೆಟ್ಟಿ ಅವರ ಪುತ್ಥಳಿ ಅನಾವರಣ ಮತ್ತು ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಮೊದಲು ತಾವು ಹೇಗಿರಬೇಕು ಎಂದು ತಮ್ಮ ನಡೆತಯ ಮೂಲಕ ಮಾದರಿಯಾದವರು ದಿ. ಆರ್.ಎನ್ ಶೆಟ್ಟಿ ಎಂದರು.
‘ಶಿಕ್ಷಣ, ಹೋಟೆಲ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಹೆಸರು ಮಾಡಿದ್ದ ಅವರು ದಾನ–ಧರ್ಮದಲ್ಲೂ ಎತ್ತಿದ ಕೈ. ಬಡವರ ಕಷ್ಟಕ್ಕೆ ಮಿಡಿಯುತ್ತಿದ್ದ ಅವರು ಲೆಕ್ಕವಿರದಷ್ಟು ಮಂದಿಗೆ ಸಹಾಯ ಮಾಡಿದ್ದಾರೆ. ಕೋವಿಡ್ –19 ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ದಿನಸಿ ವಿತರಿಸಿದ್ದಾರೆ. ಮನುಷ್ಯನ ಸಾರ್ಥಕ ಜೀವನ ಹೇಗಿರಬೇಕು ಎಂಬುದಕ್ಕೆ ಅವರು ನಿದರ್ಶನವಾಗಿದ್ದಾರೆ’ ಎಂದು ಬಣ್ಣಿಸಿದರು.
ರಾಜ್ಯ ಹೊಟೇಲ್ಗಳ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ‘ಆರ್.ಎನ್. ಶೆಟ್ಟಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಮುದಾಯ ಮುನ್ನಡೆಯುತ್ತಿದೆ. ಮುರುಡೇಶ್ವರ ಕ್ಷೇತ್ರದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಮಹತ್ತರವಾದುದು’ ಎಂದು ನೆನೆದರು.
ಶೆಟ್ಟಿ ಅವರ ಪುತ್ಥಳಿಯನ್ನು ಗಣ್ಯರು ಅನಾವರಣಗೊಳಿಸಿದರು. ನಂತರ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಬಂಟರ ಸಂಘದ ಸಂಸ್ಥಾಪಕ ಸದಸ್ಯ ಕೆ. ಜಯಂತ ರೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೊರಟ್ಟಿ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ವಸಂತ ಹೊರಟ್ಟಿ ಪ್ರಶಸ್ತಿ ಸ್ವೀಕರಿಸಿದರು.
ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಸತೀಶ ಆರ್. ಶೆಟ್ಟಿ, ಸುನೀಲ ಶೆಟ್ಟಿ, ಜೀವನ ಶೆಟ್ಟಿ, ಶೋಭಾ ಶೆಟ್ಟಿ, ರಾಜಣ್ಣ ಕೊರವಿ ಹಾಗೂ ಮಹೇಂದ್ರ ಸಿಂಘಿ ಹಾಗೂ ಬಂಟ್ ಸಮಾಜದ ಪ್ರಮುಖರು ಇದ್ದರು.φ
