ಹುಬ್ಬಳ್ಳಿ; ಪ್ತಯಾಣಿಕರಿಗೆ ವಿಶ್ರಾಂತಿ ತಾಣವಾಗಬೇಕಿದ್ದ ನವಲಗುಂದ ಪಟ್ಟಣದ ಬಸ್ ನಿಲ್ದಾಣ, ಅವ್ಯವಸ್ಥೆಯ ತಾಣವಾಗಿದೆ. ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ. ಅಷ್ಟೇ ಅಲ್ಲ ದುಶ್ಚಟಗಳ ಅಡ್ಡೆಯಾಗಿ ಮಾರ್ಪಡುತ್ತಿದೆ.
ಕಸ ಹಾಗೂ ದುಶ್ಚಟಗಳಿಂದ ಬಿಸಾಕಿದ ಟೆಟ್ರಾ ಪ್ಯಾಕೆಟ್ಗಳಿಂದ ತಂಗುದಾಣ ತುಂಬಿ ಗಲೀಜುಗೊಂಡಿದೆ. ತಂಗುದಾಣದ ಸುತ್ತಲೂ ಗಲೀಜು ನೀರು ಹರಿಯುತ್ತಿದೆ. ಇದರಿಂದ ಪ್ರಯಾಣಿಕರು ಮೂಗುಮುಚ್ಚಿಕೊಂಡು ಬಸ್ಗಾಗಿ ಕಾಯುವ ಪರಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣದ ಸುತ್ತಲಿನ
ನಿವಾಸಿಗಳು ಈ ಅವ್ಯವಸ್ಥೆಯಿಂದ ರೋಸಿ ಹೋಗಿದ್ದು, ರೋಗ ರುಜಿನಗಳು ಹರಡುತ್ತವೆಯೋ ಏನೋ ಎಂಬ ಆತಂಕದಲ್ಲಿದ್ದಾರೆ.
ಇನ್ನೂ ಶೌಚಾಲಯಗಳ ಹೊರಗೂ ಮಲ-ಮೂತ್ರ ವಿಸರ್ಜನೆ ಎಗ್ಗಿಲ್ಲದೆ ನಡೆಯುತ್ತಿದೆ. ಮಹಿಳೆಯರು ಮೂತ್ರ ವಿಸರ್ಜನೆಗೆ ಹೋಗಬೇಕಾದರೆ ಪರದಾಡುವ ಸ್ಥಿತಿ ಇದೆ. ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.
ಎಲ್ಲಿ ನೋಡಿದರಲ್ಲಿ ತ್ಯಾಜ್ಯ, ಪ್ಲಾಸ್ಟಿಕ್ಗಳು ಕಾಣುತ್ತಿವೆ. ಕಸದಬುಟ್ಟಿಯಲ್ಲಿ ಕಸ ತುಂಬಿ ನಿಲ್ದಾಣದಲ್ಲೇ ನೊಣಗಳು ಹೆಚ್ಚಾಗಿ ಹಾರಾಡುತ್ತಿವೆ. ನಿಲ್ದಾಣದ ಗೋಡೆಗಳು ಎಲೆ, ಗುಟಕಾ ಕಲೆಗಳಿಂದ ಎದ್ದು ಕಾಣುತ್ತಿವೆ.
ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯಾಣಿಕರು ಪಡಬಾರದ ಪಾಡು ಪಡುತ್ತಿದ್ದಾರೆ. ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ತಂಗುದಾಣದತ್ತ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ. ಇನ್ನು ಈ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ ಈಗ ಸಚಿವರಾಗಿದ್ದಾರೆ. ಈ ಹಿಂದೆ ನವಲಗುಂದಕ್ಕೆ ಒಂದು ಸುಸಜ್ಜಿತ ಬಸ್ ನಿಲ್ದಾಣ ಬೇಕು ಎಂದು ಕನಸು ಕಂಡಿದ್ದರು ಅಂತೆ. ಆದರೆ ಈ ನಿಲ್ದಾಣ ನಿರ್ಮಾಣದಲ್ಲಿಯೋ ಸಹ ಸಾಕಷ್ಟು ಗೊಂದಲ ಇದೆ. ಬಸ್ ನಿಲ್ದಾಣ ನವೀಕರಣ ಮಾಡುವ ಸಂದರ್ಭದಲ್ಲಿ ಅಂದಿನ ಶಾಸಕ ಎನ್ .ಎಚ್ ಕೋನರೆಡ್ಡಿ ಅವರು ಸಾಕಷ್ಟು ಹೋರಾಟ ಮಾಡಿ ಹೆಚ್ಚಿನ ಅನುದಾನ ಬಿಡುಗಡೆಗೆ ಶ್ರಮಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ ಈಗ ಯಾರು ಈ ನಿಲ್ದಾಣ ಆವರಣದಲ್ಲಿನ ಸ್ವಚ್ಚತಗೆ ಮುಕ್ತಿ ಕೊಡತಾರಾ ಅಂತಾ ನೋಡಬೇಕು.
Check Also
ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ
Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …