ಬೆಂಗಳೂರು : ಸಂಪುಟ ವಿಸ್ತರಣೆ ಕಸರತ್ತು ಜೋರಾಗಿ ನಡೆದಿದೆ. ವಿಧಾನ ಸಭಾ ಚುನಾವಣೆ ಕೇವಲ ಇನ್ನೂ ಒಂದು ವರ್ಷ ಇರುವುದರಿಂದ ಹೆಚ್ಚು ವಿಳಂಬ ಮಾಡದೇ ಆದಷ್ಟು ಶೀಘ್ರದಲ್ಲೇ ಮುಹೂರ್ತ ನಿಗದಿ ಮಾಡಲು ಸ್ವತಃ ಸಿಎಂ ಉತ್ಸುಕರಾಗಿದ್ದಾರೆ.
ಈಗಾಗಲೇ ಸಂಪುಟದಿಂದ ಕೋಕ್ ನೀಡುವವರಿಗೆ ಸಿಎಂ ಕೂಡ ಮಾಹಿತಿಯನ್ನು ನೀಡಿದ್ದು, ವರಿಷ್ಠರ ಸೂಚನೆಯಂತೆ ಈ ನಿರ್ಧಾರ ಎಂಬ ಸಂದೇಶವನ್ನು ಕೊಟ್ಟಿದ್ದಾರೆ. ಅಂತಿಮವಾಗಿ ಸೋಮವಾರದ ನಂತರ ದೆಹಲಿಗೆ ತೆರಳಿದ ಬಳಿಕ ಸಚಿವ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬ ಸ್ಪಷ್ಟ ಚಿತ್ರಣ ದೊರಕಲಿದೆ.
ಇದರಿಂದ ಕೆಲವು ಸಚಿವರಿಗೆ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದ್ದು, ಯಾರಿಗೆ ಗೇಟ್ಪಾಸ್ ಸಿಗಲಿದೆ ಎಂಬುದರ ಬಗ್ಗೆ ಢವ ಢವ ಆರಂಭವಾಗಿದೆ. ವಿಜಯನಗರದಲ್ಲಿ ನಡೆದ ಎರಡು ದಿನಗಳ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಂಪುಟದಿಂದ ಕೈಬಿಡಬಹುದಾದ ಸಂಭವನೀಯ ಸಚಿವರ ಮಾಹಿತಿ ಪಡೆದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಮೂಲಕ ಇವರಿಗೆ ಸಂದೇಶವನ್ನು ರವಾನಿಸಿದ್ದು, ಮುಂದಿನ ದಿನಗಳಲ್ಲಿ ನೀವು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಬೇಕೆಂದು ಸೂಚನೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಭಾನುವಾರದ ನಂತರ ಯಾವುದೇ ಸಂದರ್ಭದಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಲಿದ್ದು, ಜೆ.ಪಿ.ನಡ್ಡಾ, ಅಮಿತ್ ಷಾ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ನಂತರ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ನಡೆಯಲಿದೆ.
ಈ ಬಾರಿ ಪಕ್ಷ ನಿಷ್ಠೆ ಪ್ರದೇಶವಾರು, ಸಾಮಾಜಿಕ ನ್ಯಾಯ,ಬರಲಿರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಸಂಪುಟ ಸರ್ಜರಿಯಾಗುವ ಲಕ್ಷಣಗಳಿವೆ.
ಕಾಂಗ್ರೆಸ್, ಜೆಡಿಎಸ್ ತೊರೆದು ಬಂದಿದ್ದವರಲ್ಲಿ ಕೆಲವರನ್ನು ಕೈಬಿಡಬೇಕೆಂಬ ಒತ್ತಡವಿದೆ. ಆದರೆ ಅವರನ್ನು ಕೈಬಿಟ್ಟರೆ ನಾಳೆ ಬಿಜೆಪಿಗೆ ಬರುವವರು ಹಿಂದೆಮುಂದೆ ನೋಡಬಹುದು ಎಂಬ ಅಳುಕು ಕೂಡ ಇದೆ. ಸಚಿವರಾದ ಕೆ.ಸಿ.ನಾರಾಯಣ ಗೌಡ, ಬಿ.ಸಿ.ಪಾಟೀಲ್ ಸೇರಿದಂತೆ ಸುಮಾರು ಮೂರರಿಂದ ನಾಲ್ವರು ಸಚಿವರನ್ನು ಕೈಬಿಡಬೇಕೆಂಬ ಒತ್ತಡ ಸ್ವಪಕ್ಷೀಯರಿಂದಲೇ ಕೇಳಿಬಂದಿದೆ.
ಏನೇ ಅಡ್ಡಿ ಆತಂಕಗಳಿದ್ದರೂ ತಿಂಗಳ ಅಂತ್ಯಕ್ಕೆ ನಡೆಯುವುದು ಬಹುತೇಕ ಖಚಿತವಾಗಿದೆ.