ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಬೆಳಗಾವಿಯಲ್ಲಿ ಬೀಡು ಬಿಟ್ಟಿರುವ ಉಡುಪಿ ಪೋಲಿಸರು ಪ್ರಕರಣದ ಆಳಕ್ಕಿದು ತನಿಖೆ ನಡೆಸಿದ್ದು ಹಿಂಡಲಗಾ ಪಿಡಿಒ, ಅದ್ಯಕ್ಷ ಸೇರಿದಂತೆ ಗುತ್ತಿಗೆದಾರರನ್ನ ತನಿಖೆಗೆ ಒಳಪಡಿಸಿದ್ದಾರೆ.
ಮಾಜಿ ಸಚಿವ ಈಶ್ವರಪ್ಪ ವಿರುದ್ದ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿ, ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ತನಿಖೆ ಭರದಿಂದ ಸಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉಡುಪಿ ಪೋಲಿಸರು ಕಳೆದ ನಾಲ್ಕು ದಿನಗಳಿಂದ ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಸಂತೋಷ ಕುಟುಂಬಸ್ಥರು, ಸಂಬಂಧಿಕರ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿರುವ ಪೋಲಿಸರು ಇದೀಗ್ ಕಾಮಗಾರಿ ನಡೆದಿರುವ ಹಿಂಡಲಗಾ ಗ್ರಾಮ ಪಂಚಾಯತಿಗೆ ಲಗ್ಗೆ ಇಟ್ಟು ಪ್ರಮುಖ ಕಡತಗಳನ್ನ ಜಾಲಾಡಿದ್ದಾರೆ. ಹಿಂಡಲಗಾ ಗ್ರಾಮ ಪಂಚಾಯತಿ ಪಿಡಿಒ ವಸಂತಕುಮಾರಿ ಹಾಗೂ ಹಿಂದಿನ ಪಿಡಿಒ ಗಂಗಾಧರ ನಾಯಕನನ್ನ ತೀವ್ರ ವಿಚಾರಣೆಗೆ ಒಳಪಡಿಸಿ, ಕಾಮಗಾರಿ ನಡೆಸಲಾಗಿದೆಯಾ? ಎಲ್ಲೆಲ್ಲಿ ಕಾಮಗಾರಿ ನಡೆದಿದೆ, ಕಾಮಗಾರಿಗೆ ಅನುಮತಿ ನೀಡಿದ್ದ್ಯಾರು ಮತ್ತು ಕಾಮಗಾರಿಗೆ ಅನುಮತಿ ಇಲ್ಲದಿದ್ದರೆ ಕಾಮಗಾರಿ ನಡೆಸಲು ಬಿಟ್ಟಿದ್ದೇಕೆ ಎಂಬಿತ್ಯಾದಿ ಪ್ರಶ್ನೆ ಮಾಡಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಇನ್ನೂ ಮೃತ ಸಂತೋಷ ಜೊತೆಗೆ ಕಾಮಗಾರಿಗಳ ಜವಾಬ್ದಾರಿ ಹೊತ್ತಿದ್ದ ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಮಂಡೋಳಕರ್ ಮನೆಗೆ ಭೇಟಿ ನೀಡಿರುವ ಉಡುಪಿ ಪೋಲಿಸರು ನಾಗೇಶ ಮಂಡೋಳಕರ್ ವಿಚಾರಣೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ತುಂಡು ಗುತ್ತಿಗೆ ಪಡೆದ 12 ಸಬ್ ಕಾಂಟ್ರಾಕ್ಟರಗಳ ವಿಚಾರಣೆ ಕೂಡ ನಡೆಸಿದ್ದಾರೆ. ಟೆಂಡರ್ ಇಲ್ಲದೇ, ವರ್ಕ ಆರ್ಡರ್ ಇಲ್ಲದೇ ಕಾಮಗಾರಿ ಆರಂಭಿಸಲು ಹೇಳಿದ್ದು ಯಾರು? ಮಾಜಿ ಸಚಿವ ಈಶ್ವರಪ್ಪರನ್ನ ಭೇಟಿಯಾಗಿದ್ದು ಯಾರು? ಸಂತೋಷ ಮೇಲೆ ಬಿಲ್ ಗಾಗಿ ಯಾರಾದ್ರು ಒತ್ತಡ ಹಾಕಿದ್ರಾ ಎಂಬಿತ್ಯಾದಿ ಪ್ರಶ್ನೆ ಕೇಳಿ ಉತ್ತರ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ 108 ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿರುವ ಪೋಲಿಸರು ಮಾಪನಕಾರರನ್ನ ಕರೆಸಿ ಅಳತೆ ಮಾಡಿಸಿದ್ದಾರೆ. ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ನಾಗೇಶ್ ಮಂಡೋಳಕರ್ ಸಂತೋಷ ಒಬ್ಬನೇ ಕಾಮಗಾರಿ ಮಾಡಿಲ್ಲ, ಅವನೊಟ್ಟಿಗೆ 12 ಜನ ಗುತ್ತಿಗೆದಾರರು ಕಾಮಗಾರಿ ಮಾಡಿದ್ದಾರೆ ಎಂದಿದ್ದಾರೆ.
ಒಟ್ಟಿನಲ್ಲಿ ಸಂತೋಷ ಪ್ರಕರಣವನ್ನು ಸಿರೀಯಸ್ ಆಗಿ ಪರಿಗಣಿಸಿರುವ ಉಡುಪಿ ಪೋಲಿಸರು, ಹಿಂಡಲಗಾದಲ್ಲಿ ಇಂಚಿಂಚು ಜಾಲಾಡುತ್ತಿದ್ದಾರೆ. ಪೋಲಿಸರ ಸಂಪೂರ್ಣ ತನಿಖೆಯ ಬಳಿಕವಷ್ಟೇ ಮತ್ತಷ್ಟು ಸತ್ಯಾಸತ್ಯಗಳು ಹೊರ ಬೀಳಲಿವೆ.
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಕೇಸ್ ನಂಬರ್ …