ಹುಬ್ಬಳ್ಳಿ; ತಾಲೂಕಿನ ಗ್ರಾಮಾಂತರ ಪ್ರದೇಶ ಸೇರಿದಂತೆ ನಗರದಲ್ಲಿ ವಟ ಸಾವಿತ್ರಿ ವ್ರತವನ್ನು ಅತ್ಯಂತ ಸಡಗರ ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.
ಸೌಭಾಗ್ಯ ಸ್ಥಿರವಾಗಿರಲು ಮಾಡುವ ಪೂಜೆಯೇ ವಟ ಸಾವಿತ್ರಿ ವ್ರತವಾಗಿದೆ. ಇದನ್ನು ಜ್ಯೇಷ್ಠ ಮಾಸದ ಪೂರ್ಣಿಮೆಯಂದು ಈ ಹಬ್ಬ ಆಚರಿಸಲಾಗುತ್ತದೆ. ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಮಹಾರಾಷ್ಟ್ರ, ಉತ್ತರ ಪ್ರದೇಶಗಳಲ್ಲಿ ಆಚರಿಸುತ್ತಾರೆ. ಈ ವ್ರತವನ್ನು ವಿವಾಹಿತ ಮಹಿಳೆಯರು ಪತಿಯ ಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಕೈಗೊಳ್ಳುತ್ತಾರೆ. ಪಾತಿವ್ರತ್ಯಕ್ಕೆ ಹೆಸರಾಗಿರುವ ಸತಿ ಸಾವಿತ್ರಿಯ ಪತಿವ್ರತಾ ಧರ್ಮ ಪಾಲನೆ ಮತ್ತು ಪತಿ ಸತ್ಯವಾನ್ನ ಪ್ರಾಣ ರಕ್ಷಣೆ ಮಾಡಿದ ದಿನವಾದ ಜ್ಯೇಷ್ಠ ಮಾಸದ ಅಮವಾಸ್ಯೆಯಂದು ಈ ವ್ರತವನ್ನು ಆಚರಿಸಲಾಗುತ್ತದೆ.
ವಟ ಪೂರ್ಣಿಮಾ ದಿನದಂದು ವಿವಾಹಿತ ಮಹಿಳೆಯರು ಪ್ರಾತಃಕಾಲದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ಶುಚಿರ್ಭೂತರಾಗಿ ಸಿದ್ಧರಾದ ನಂತರ ವ್ರತದ ಸಂಕಲ್ಪವನ್ನು ಕೈಗೊಳ್ಳುಬೇಕು. ಈ ದಿನ ಆಲದ ಮರವನ್ನು ಪೂಜಿಸುವ ಸಂಪ್ರದಾಯವಿದೆ. ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಆಲದಮರದಲ್ಲಿ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರು ನೆಲೆಸಿರುತ್ತಾರೆ. ಸತ್ಯವಾನ್ನ ಶವವನ್ನು ಆಲದ ಮರದಡಿಯಲ್ಲಿ ಇಟ್ಟು ಕಾಯುವಂತೆ ಸಾವಿತ್ರಿ ಹೇಳಿರುವ ಕಾರಣ ಈ ದಆಲದ ಮರವನ್ನು ಪೂಜಿಸುವ ರೂಢಿ ಇದೆ.
ಶ್ರದ್ಧೆಯಿಂದ ಆಲದಮರಕ್ಕೆ ನೀರೆರೆದು, ಭಕ್ತಿಯಿಂದ ಪೂಜಿಸಿದ ನಂತರ ರಕ್ಷಾ ದಾರವನ್ನು ಮರಕ್ಕೆ ಕಟ್ಟುವುದು ನಂತರ ಏಳು ಪ್ರದಕ್ಷಿಣೆಗಳನ್ನು ಹಾಕಬೇಕು. ವಿಧಿ-ವಿಧಾನಗಳಿಂದ ಪೂಜೆ ಸಲ್ಲಿಸಿದ ನಂತರ ಸೌಭಾಗ್ಯ ಸ್ಥಿರವಾಗಿ ಇರುವಂತೆ ಮತ್ತು ಬೇಡಿಕೊಂಡು ಆಶೀರ್ವಾದವನ್ನು ಪಡೆದರು.
ಮಹಿಳೆಯರು ಸುಖ-ಸಮೃದ್ಧಿ ಮತ್ತು ಸೌಭಾಗ್ಯಕ್ಕಾಗಿ ಮಾಡುವ ಪೂಜೆ ಇದಾಗಿದೆ. ವಟ ಸಾವಿತ್ರಿ ಪೂಜೆಯನ್ನು ರೋಹಿಣಿ ನಕ್ಷತ್ರದಲ್ಲಿ ಆಚರಿಸುವುದು ಹೆಚ್ಚು ಶ್ರೇಷ್ಠವೆಂದು ಹೇಳಲಾಗುತ್ತದೆ. ಹಾಗಾಗಿ ಗುರುವಾರದ ಅಮಾವಾಸ್ಯೆಯಂದು ಬೆಳಗ್ಗೆ 10:45ರ ವರೆಗೆ ವೃಷಭದಲ್ಲಿ ಚಂದ್ರ ಮತ್ತು ರೋಹಿಣಿ ನಕ್ಷತ್ರವಿರುತ್ತದೆ. ಆ ಅವಧಿಯಲ್ಲಿ ಮುತ್ತೈದೆಯರು ಈ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುವುದಲ್ಲದೆ, ಸೌಭಾಗ್ಯ ಸ್ಥಿರವಾಗುತ್ತದೆ. ಅಷ್ಟೇ ಅಲ್ಲದೇ ಬೆಳಗ್ಗೆ 11:43ರ ತನಕವೂ ವಟ ಸಾವಿತ್ರಿ ವ್ರತ ಪೂಜೆಯನ್ನು ಮಾಡಿ, ವ್ರತ ಕತೆಯನ್ನು ಕೇಳಬಹುದಾಗಿದೆ.
ವಟ ಸಾವಿತ್ರಿ ಕತೆ
ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಿಂದ, ಅಮಾವಾಸ್ಯೆಯ ತನಕ ಮೂರು ದಿನಗಳ ಕಾಲ ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ವಟ ಪೂರ್ಣಿಮಾ ಅಂದರೆ ಹುಣ್ಣಿಮೆಯಂದು ಈ ವ್ರತವನ್ನು ಆಚರಿಸುವ ರೂಢಿ ಸಹ ಇದೆ. ಪತಿವ್ರತೆಯಾದ ಸಾವಿತ್ರಿಯ ಪತಿ ಸತ್ಯವಾನ್ನನ್ನು ಯಮನು ತನ್ನ ಪಾಶದಿಂದ ಪ್ರಾಣವನ್ನು ತೆಗೆಯಲು ಪ್ರಯತ್ನಿಸಿದ ದಿನ. ಆದರೆ, ಸತಿ ಸಾವಿತ್ರಿಯು ತನ್ನ ಪಾತಿವ್ರತ್ಯದ ಪ್ರಭಾವದಿಂದ ಯಮನಿಂದ ಪತಿಯ ಪ್ರಾಣವನ್ನು ವಾಪಸ್ ಪಡೆದು ಪಾತಿವ್ರತ್ಯದ ಶಕ್ತಿಯನ್ನು ಜಗತ್ತಿಗೆ ತಿಳಿಸುತ್ತಾಳೆ. ಪತಿವ್ರತಾ ಧರ್ಮವನ್ನು ಶ್ರದ್ಧೆಯಿಂದ ಪಾಲಿಸಿ ಸಫಲತೆಯನ್ನು ಕಂಡ ಸತಿ ಸಾವಿತ್ರಿಯ ರೂಪದಲ್ಲಿ ಸೌಭಾಗ್ಯವನ್ನು, ಮುತ್ತೈದೆತನವನ್ನು ಸ್ಥಿರವಾಗಿರಿಸೆಂದು ದೇವರಿಗೆ ಸಲ್ಲಿಸುವ ಪೂಜೆ ಇದಾಗಿರುತ್ತದೆ.
