ಹುಬ್ಬಳ್ಳಿ;ಇಂದಿನಿಂದಲೇ ಪರಿಸರ ರಕ್ಷಣೆ ಮಾಡದೇ ಇದ್ದಲ್ಲಿ ಮುಂದೆ ಅಕ್ಕಪಕ್ಕದ ದೇಶ, ಅನ್ಯ ರಾಜ್ಯಗಳೊಂದಿಗೆ ಹೊಡೆದಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಆತಂಕ ವ್ಯಕ್ತಪಡಿಸಿದರು.
ಅವರು ಪರಿಸರ ದಿನಾಚರಣೆಯ ಅಂಗವಾಗಿ ಇಲ್ಲಿನ ತೋಳನಕೆರೆಯ ಮುಖ್ಯದ್ವಾರದಿಂದ ಭಾನುವಾರ ಗ್ರೀನ್ ಕರ್ನಾಟಕ ಅಸೋಸಿಯೇಶನ್, ವಿಕೇರ್ ಫೌಂಡೇಷನ್, ವಸುಂದರಾ ಫೌಂಡೇಷನ್ ಹಾಗೂ ಸ್ಕೆಟೌನ್ ಗ್ರುಪ್ ವತಿಯಿಂದ ನಡೆದ ರನ್ ಫಾರ್ ನೇಚರ್ ಓಟದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಆದ್ಯತೆ ನೀಡಿದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆ, ರಾಜ್ಯ ಹಾಗೂ ದೇಶವು ಹಸಿರು ಭಾರತವಾಗುವುದರಲ್ಲಿ ಸಂದೇಹವಿಲ್ಲ. ಈ ಹಿಂದೆ ನಡೆದ ಕಾರ್ಗಿಲ್ ಯುದ್ಧದಲ್ಲಿ ದೇಶದ 527 ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಮುಂಬರುವ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವದ ದಿನದಂದು ನಗರದ ಒಂದುಕಡೆ ದೇಶಪ್ರೇಮಿಗಳೆಲ್ಲ ಸೇರಿ ಹುತಾತ್ಮರ ಹೆಸರಿನಲ್ಲಿ 527 ದೀಪಗಳನ್ನು ಬೆಳಗಿಸುವ ಮೂಲಕ ಹುತಾತ್ಮ ಯೋಧರ ಸ್ಮರಿಸುವ ಕಾರ್ಯ ಕೈಗೊಳ್ಳುವಂತೆ ಸಲಹೆ ನೀಡಿದರು.
ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ.ಬಿ. ನಾಯಕ ಮಾತನಾಡಿ, ಪರಿಸರ ಇಂದು ವಿನಾಶದ ಅಂಚಿಗೆ ತಲುಪುತ್ತಿದೆ. ಈ ಕುರಿತು ಜಾಗೃತಿ ವಹಿಸಬೇಕಾದ ಜನರೇ ಇಂದು ನಿಷ್ಕಾಳಜಿ ತೋರುತ್ತಿರುವುದು ಸರಿಯಲ್ಲಿ. ಈ ಹಿಂದೆ 55ಲಕ್ಷ ಸಸ್ಯ ಸಂಪತ್ತು ಹೊಂದಿದ್ದ ಕರ್ನಾಟಕದಲ್ಲಿ ಇಂದು 45 ಸಾವಿರ ಸಸ್ಯ ಸಂಪತ್ತು ಉಳಿದಿವೆ ಎಂದರೆ ಪರಿಸರ ಹೇಗೆ ಅವನತಿಯತ್ತ ಹೊರಟಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು.
ಗಿಡಮರಗಳನ್ನು ಕಡಿಯುವುದರಿಂದ ಪರಿಸರದಲ್ಲಿ ಬದಲಾವಣೆಗೆ ಕಾರಣವಾಗಲಿದೆ. ಮಳೆ ಪ್ರಮಾಣ ಕಡಿಮೆಯಾಗುವುದು, ಉಷ್ಣ ಪ್ರಮಾಣ ಏರಿಕೆಯಾಗುತ್ತಾ ಸಾಗಲಿದೆ. ಈಗಾಗಲೇ ಶೇ. 26ರಿಂದ 28ರ ವರೆಗೆ ಮಳೆ ಪ್ರಮಾಣ ಕಡಿಮೆಯಾದರೆ, ಶೇ. 2ರಷ್ಟು ಉಷ್ಣ ಪ್ರಮಾಣ ಏರಿಕೆಯಾಗಿದೆ. ಇದೇ ರೀತಿ ಮುಂದುವರೆದಲ್ಲಿ ಪರಿಸರದೊಂದಿಗೆ ಮಾನವನ ಅವನತಿಯಾಗಲಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಉತ್ತಮ ಮಳೆಯಾಗಬೇಕಾದರೆ ಗಿಡಮರಗಳನ್ನು ನಮ್ಮ ಮಕ್ಕಳಂತೆ ಪೋಷಿಸಿ ಬೆಳೆಸುವಂತೆ ಕರೆ ನೀಡಿದರು.
ಪಾಲಿಕೆ ಮೇಯರ್ ವೀಣಾ ಬರದ್ವಾಡ ಮಾತನಾಡಿ, ಮನೆಗೊಂದು ಮರ ಬೆಳೆಸುವಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಬೇಕಿದೆ. ಉತ್ತಮ ಮಳೆಯಾಗಬೇಕಾದಲ್ಲಿ ಪ್ರತಿಯೊಬ್ಬರೂ ಗಿಡಮರ ಬೆಳೆಸುವ ಕಾರ್ಯ ಮಾಡಿ. ಪಾಲಿಕೆಯಿಂದಲೂ ಈ ವರ್ಷ ಒಂದು ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದ್ದು, ಆದಷ್ಟು ಶೀಘ್ರವೇ ಇದಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.
ಗ್ರೀನ್ ಕರ್ನಾಟಕ ಅಸೋಸಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ ಮಾತನಾಡಿ, ಪರಿಸರ ಜಾಗೃತಿ ಎಲ್ಲರ ಕರ್ತವ್ಯ ಆಗಿದ್ದು ಇಂದಿನ ಕಾರ್ಯಕ್ರಮ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು.
. ಈ ಸಂದರ್ಭದಲ್ಲಿ ವಸುಂಧರಾ ಫೌಂಡೇಶನ್ ಅಧ್ಯಕ್ಷ ಮೇಘರಾಜ ಕೆರೂರ, ವೀಕೇರ್ ಫೌಂಡೇಶನ್ ಅಧ್ಯಕ್ಷ ಗಂಗಾಧರ ಗುಜಮಾಗಡಿ, ಪ್ರೊ. ಎಂ.ಆರ್. ಪಾಟೀಲ, ಎಸ್.ಸಿ. ಫೌಂಡೇಶನ್ನ ವಿನಯ ಹಿರೇಮಠ, ಶಂಕರ ಹೊಸಮನಿ ಸೇರಿದಂತೆ ಹಲವರಿದ್ದರು. ಆರ್ಜೆ ರಷೀದ ನಿರೂಪಿಸಿದರು. ಪ್ರಿಯಾ ಗುಜಮಾಗಡಿ ಸ್ವಾಗತಿಸಿದರು.
ರನ್ ಫಾರ್ ನೇಚರ್ಗೆ ಚಾಲನೆ:
ಇಲ್ಲಿನ ತೋಳನಕೆರೆ ಮುಖ್ಯದ್ವಾರದಿಂದ ನಡೆದ ರನ್ ಫಾರ್ ನೇಚರ್ ಓಟಕ್ಕೆ ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ್ ಚಾಲನೆ ನೀಡಿದರು. ಸಾವಿರಾರು ವಿದ್ಯಾರ್ಥಿಗಳು, ಮುದ್ದು ಮಕ್ಳಳು, ಸಾರ್ವಜನಿಕರು ಓಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
