ಪಂಚವಟಿಯಲ್ಲಿ ಏಳು ವಿಭಾಗಗಳನ್ನು ತೆರೆಯಲು ಉದ್ದೇಶ- ಡಾ. ಎ.ಸಿ.ವಾಲಿ ಗುರೂಜಿ
ಧರ್ಮಕ್ಕೆ ಅಳಿವು ಅಸಾಧ್ಯ- ವಿನಯ ಗುರೂಜಿ
ಹುಬ್ಬಳ್ಳಿ: ಮುಂದಿನ ದಿನಗಳಲ್ಲಿ ರಾಜಕೀಯ ಅಂತ್ಯಗೊಳ್ಳಬಹುದು. ಆದರೆ, ಧರ್ಮಕ್ಕೆ ಮಾತ್ರ ಅಂತ್ಯವಿಲ್ಲ. ಇದನ್ನು ಅರಿತು ಬದುಕಬೇಕು. ಅಧ್ಯಾತ್ಮ ಚಿಂತನೆಗಳಿಂದ ನಾವು ಪ್ರಬಲರಾಗಬಹುದು.ಇದು ಸೂರ್ಯ ಚಂದ್ರರೂ ಇರುವರೆಗೂ ಸತ್ಯವಾದ ಮಾತು ಎಂದು ಗೌರಿಗದ್ದೆ ದತ್ತಾಶ್ರಮದ ಶ್ರೀ ವಿನಯ ಗುರೂಜಿ ಅಭಿಪ್ರಾಯಪಟ್ಟರು. ಹುಬ್ಬಳ್ಳಿ
ತಾಲ್ಲೂಕಿನ ಭಂಡಿವಾಡ ಗ್ರಾಮದಲ್ಲಿಂದು ಏರ್ಪಡಿಸಿದ್ದ ಪಂಚವಟಿ ಗೋಶಾಲೆ ಉದ್ಘಾಟನೆ ಹಾಗೂ ಸಾವಯವ ಕೃಷಿ ದೀಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತದಲ್ಲಿ ಗೋವಿಗೆ ತಾಯಿ ಸ್ಥಾನ ನೀಡಲಾಗಿದೆ. ಅದನ್ನು ಪೂಸಿಸುವ ಸಂಸ್ಕೃತಿ ನಮ್ಮದು. ಯಾವೆಲ್ಲ ದೇಶಗಳಲ್ಲಿ ಗೋಹತ್ಯೆ ನಡೆದಿದೆಯೋ ಅಲ್ಲೆಲ್ಲ ಅವಘಡಗಳು ಸಂಭವಿಸಿವೆ’ ಎಂದರು.
ಪಾರಂಪರಿಕ ವೈದ್ಯ ಹನುಮಂತ ಮಳಲಿ, ‘ಪ್ರತಿಯೊಬ್ಬರು ಗೋವನ್ನು ಸಾಕಬೇಕು. ನಮ್ಮ ದೇಶದಲ್ಲಿ 2.95 ಕೋಟಿ ಮಂದಿ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಪ್ರತಿ ದಿನ 6 ಸಾವಿರ ರೋಗಿಗಳಿಗೆ ಮಾತ್ರ ಚಿಕಿತ್ಸೆ ದೊರೆಯುತ್ತಿದೆ. ಮನೆಯಲ್ಲಿ ಗೋವು ಇದ್ದರೆ, ಎಲ್ಲ ರೋಗಗಳಿಂದ ಮುಕ್ತಿ ಪಡೆಯಬಹುದು’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಗದುಗಿನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಭಾರತಿ ಸ್ವಾಮೀಜಿ, ‘ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ನಮ್ಮ ಪಾಲಿನ ದೈವವಾಗಿದ್ದರು. ಅವರ ತತ್ವ–ಆದರ್ಶಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ಗೋವು ನಮ್ಮ ಸಂಸ್ಕಾರದ ಅಸ್ಮಿತೆ’ ಎಂದರು.
ಪಂಚವಟಿ ಗೋಶಾಲೆ ಮುಖ್ಯಸ್ಥ ಡಾ.ಎ.ಸಿ. ವಾಲಿ ಮಹಾರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಪಂಚವಟಿಯಲ್ಲಿ ಏಳು ವಿಭಾಗಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ನಾಲ್ಕು ಕರು, ಒಂದು ಕುದುರೆ ಸಾಕಣೆ ಹಾಗೂ ಉಳಿದೆರಡು ದೇಶಿ ಹಸುಗಳನ್ನು ಸಾಕಣೆ ಮಾಡಲಾಗುವುದು. ಪ್ರತಿ ವರ್ಷ ಮೂರು ದಿನಗಳವರೆಗೆ ಗೋ ಉತ್ಸವ ಆಚರಿಸಲಾಗುವುದು. ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶ ನಮ್ಮದಾಗಿದೆ’ ಎಂದು ತಿಳಿಸಿದರು.
ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶಿಗ್ಗಾವಿಯ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಈಶ್ವರಪ್ಪ ಉಳ್ಳಾಗಡ್ಡಿ, ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ, ಬಿ.ವಿ. ಗೀತಾ, ವರದಶ್ರೀ ಫೌಂಡೇಷನ್ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಗ್ರಾಮದ ಹಿರಿಯರು, ವಿವಿಧದ ಸಾಧಕರು
ಇದ್ದರು.