ನಾನು ರೈತರ, ಬಡವರ, ಕೂಲಿ ಕಾರ್ಮಿಕರ, ಅಸ‌ಹಾಯಕರ ಕಣ್ಣೀರು ಒರೆಸಲು ಬಂದಿದ್ದೇನೆ- ಲಾಡ್

Spread the love

ಹುಬ್ಬಳ್ಳಿ: ಸಾಕಷ್ಟು ವಿಷಮ ಮತ್ತು ಗೊಂದಲದ ರಾಜಕೀಯ ಅಸ್ಥಿರತೆಯಲ್ಲಿ ನಾವಿದ್ದೇವೆ.
ಇಂದಿನ ರಾಜಕೀಯ ವಿದ್ಯಮಾನಗಳಿಂದ ಸಾಮಾಜಿಕ ಸಮಾನತೆಯ ಹರಿಕಾರರಾದ ಬುದ್ಧ, ಬಸವ, ಅಂಬೇಡ್ಕರ್‌ರ ತತ್ವಗಳು ಮರೆಯಾಗುತ್ತಿವೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಕಳವಳ ವ್ಯಕ್ತಪಡಿಸಿದರು‌. ಕಲಘಟಗಿ
ತಾಲ್ಲೂಕಿನ ಮಡಕಿ ಹೊನ್ನಳ್ಳಿ ಗ್ರಾಮದ ಅಮೃತ ನಿವಾಸದಲ್ಲಿ ತಮ್ಮ ಜನ್ಮದಿನದ ಅಂಗವಾಗಿ ಸೋಮವಾರ ಸಂತೋಷ್ ಲಾಡ್ ಫೌಂಡೇಷನ್‌ನಿಂದ ಹಮ್ಮಿಕೊಂಡ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು– ವರರನ್ನು ಆಶೀರ್ವದಿಸಿ ಮಾತನಾಡಿದರು.
‘ಇದು ರಾಜಕೀಯ ಕಾರ್ಯಕ್ರಮವಲ್ಲ. ಸ್ವಯಂ ಪ್ರೇರಣೆಯಿಂದ ಮಾಡುತ್ತಿದ್ದೇನೆ. ಕಲಘಟಗಿ–ಅಳ್ಳಾವರ ನನಗೆ ರಾಜಕೀಯ ಪುನರ್‌ಜನ್ಮ ನೀಡಿದ ಕ್ಷೇತ್ರ’ ಎಂದು ತಿಳಿಸಿದರು.
‘ನಾನು ನನ್ನ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ. ಬಡವರಿಗೆ ಅನುಕೂಲವಾಗಲೆಂದು 4 ಸಾವಿರ ಜೋಡಿ ಸಾಮೂಹಿಕ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ಇಂದಿನ ದಿನಗಳಲ್ಲಿ ಕನ್ಯೆ ಸಿಗುವುದು ಕಷ್ಟವಾಗಿದೆ. ಸಿಕ್ಕಷ್ಟು ಜೋಡಿಗಳಿಗೆ ನೆರವಾಗಲಿ ಎಂದು ಈ ಸಮಾರಂಭ ಆಯೋಜಿಸಲಾಗಿದೆ’ ಎಂದರು.
‘ನಾನು ರಾಜಕೀಯಕ್ಕೆ ಹಣ ಗಳಿಸಲು ಬಂದಿಲ್ಲ. ರೈತರ, ಬಡವರ, ಕೂಲಿ ಕಾರ್ಮಿಕರ, ಅಸ‌ಹಾಯಕರ ಕಣ್ಣೀರು ಒರೆಸಲು ಬಂದಿದ್ದೇನೆ. ನಾನು ಮಾಡುತ್ತಿರುವ ಹಲವು ಜನಪರ ಯೋಜನೆ, ಅಭಿವೃದ್ಧಿ ಕಾರ್ಯ ನೋಡಿ ಮತ ಹಾಕಬೇಡಿ. ನನ್ನ ಮೇಲೆ ನಂಬಿಕೆ ಇದ್ದರೆ ಮತಹಾಕಿ. ನನ್ನ ಉಸಿರು ಇರೋವರೆಗೂ ನಿಮ್ಮ ಋಣ ತೀರಿಸಲು ಬದ್ಧವಾಗಿರುವೆ’ ಎಂದರು.
ಸಂಡೂರ ಶಾಸಕ ಈ.ತುಕಾರಾಂ ಮಾತನಾಡಿ, ‘ಲಾಡ್ ಅವರು ಬಳ್ಳಾರಿ ಹಾಗೂ ಕಲಘಟಗಿ ಮತ ಕ್ಷೇತ್ರದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಿನ ಹಸ್ತ, ಬಡವರಿಗೆ ಉಚಿತ ಆರೋಗ್ಯ ತಪಾಸಣೆ, ಕನ್ನಡಕ ವಿತರಣೆ, ಬಡವರ ಹಸಿವು ನಿಗಿಸಲು ಉಪಹಾರದ ಕ್ಯಾಂಟೀನ್, ರೈತರಿಗೆ ಉಚಿತ ಕೊಳವೆ ಭಾವಿ ಇನ್ನು ಹಲವು ಜನಪರ ಯೋಜನೆ ನೀಡಿದವರು ಇಂತಹ ನಾಯಕ ಮತ್ತೆ ಸಿಗುವದು ಕಷ್ಟ ಎಂದರು.
ಕೆಪಿಸಿಸಿ ವಕ್ತಾರೆ ಕವಿತಾ ರೆಡ್ಡಿ, ಅಲ್ತಾಫ್‌ ಹಳ್ಳೂರ, ಸಂತೋಷ್ ಲಾಡ್ ಫೌಂಡೇಷನ್ ಅಧ್ಯಕ್ಷ ಆನಂದ ಕಲಾಲ, ಲಾಡ್‌ ಅವರ ಪುತ್ರ ಕರನ್ ಲಾಡ್, ಎಸ್.ಆರ್.ಪಾಟೀಲ, ಮಂಜುನಾಥ ಮುರಳ್ಳಿ, ಹರಿಶಂಕರ ಮಠದ, ಸೋಮಶೇಖರ ಬೆನ್ನೂರ, ವೈ.ಬಿ.ದಾಸನಕೊಪ್ಪ, ಶಿವಲಿಂಗ ಮುಗಣ್ಣವರ, ನರೇಶ ಮಲೆನಾಡು, ಬಾಬಣ್ಣ ಅಂಚಟಗೇರಿ, ಸುಧೀರ ಬೋಳಾರ, ಕುಮಾರ ಖಂಡೇಕರ, ಅಜಮತ್ ಜಾಗೀರದಾರ, ಗಂಗಾಧರ ಚಿಕ್ಕಮಠ, ಬಾಳು ಕಾನಾಪುರ, ಗುರು ಬೆಂಗೇರಿ, ಹನುಮಂತ ಹರಿಜನ ಮುಂತಾದವರಿದ್ದರು.


Spread the love

About Karnataka Junction

    Check Also

    ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟ ಕಾಂಗ್ರೆಸ್ ಗೆ ಮುಖಭಂಗ- ಬಿಜೆಪಿ ವಕ್ತಾರ ರವಿ ನಾಯಕ

    Spread the loveಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿ ಅಧಿಕಾರವನ್ನು …

    Leave a Reply