ಹುಬ್ಬಳ್ಳಿ: ವಿದ್ಯಾನಗರದಲ್ಲಿರುವ ಕೆಎಲ್ಇ ಸಂಸ್ಥೆಯ ಬಿ.ಬಿ. ಭೂಮರಡ್ಡಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಅಮೃತ ಮಹೋತ್ಸವದ ಅಂಗವಾಗಿ, ಜ. 22ರಂದು ‘ನಮ್ಮ ನಡೆ ಭವ್ಯ ಭಾರತದ ಕಡೆ’ ಎಂಬ ಧ್ಯೇಯ ವಾಕ್ಯದಡಿ ಹುಬ್ಬಳ್ಳಿ ಮ್ಯಾರಾಥಾನ್- 2023 ಆಯೋಜಿಸಲಾಗಿದೆ.
ವಿದ್ಯಾನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘14 ಕಿ.ಮೀ. ದೂರದ ಮ್ಯಾರಾಥಾನ್ ಬೆಳಿಗ್ಗೆ 6.30ಕ್ಕೆ ಕಾಲೇಜಿನ ಮುಖ್ಯ ಪ್ರವೇಶ ದ್ವಾರದಿಂದ ಆರಂಭಗೊಳ್ಳಲಿದೆ. ಕಿಮ್ಸ್, ಹೊಸೂರು ವೃತ್ತ, ದೇಶಪಾಂಡೆ ನಗರ, ದೇಸಾಯಿ ವೃತ್ತ, ಕೇಶ್ವಾಪುರ ವೃತ್ತ, ರೈಲು ನಿಲ್ದಾಣ, ಚನ್ನಮ್ಮ ವೃತ್ತ, ಗೋಕುಲ ರಸ್ತೆ, ಅಕ್ಷಯ ಪಾರ್ಕ್, ತೋಳನಕೆರೆ, ಶಿರೂರು ಪಾರ್ಕ್ ಮಾರ್ಗವಾಗಿ ಕಾಲೇಜು ತಲುಪಲಿದೆ’ ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ಹೇಳಿದರು
‘ಹದಿನಾಲ್ಕು ವರ್ಷದೊಳಗಿನವರು, 45–49 ವಯೋಮಾನದವರು ಹಾಗೂ 50 ವರ್ಷ ಮೇಲ್ಪಟ್ಟವರು ಮ್ಯಾರಾಥಾನ್ನಲ್ಲಿ ಭಾಗವಹಿಸಬಹುದು. 14 ವರ್ಷದೊಳಗಿನವರಿಗೆ 6 ಕಿ.ಮೀ. ಮಾತ್ರ ಇರಲಿದೆ. 14 ವರ್ಷದೊಳಗಿನ ಪ್ರಥಮ ವಿಜೇತರಿಗೆ ₹5 ಸಾವಿರ, ದ್ವಿತೀಯ ₹3 ಸಾವಿರ ಹಾಗೂ ತೃತೀಯ ₹2 ಸಾವಿರ ಹಾಗೂ 14ರಿಂದ 49 ವರ್ಷ ಹಾಗೂ 50 ವರ್ಷ ಮೇಲ್ಪಟ್ಟ ವಿಜೇತರಿಗೆ ಪ್ರಥಮ ₹10 ಸಾವಿರ ಹಾಗೂ ದ್ವಿತೀಯ ₹5 ಸಾವಿರ ನಗದು ಬಹುಮಾನ ವಿತರಿಸಲಾಗುವುದು’ ಎಂದು ತಿಳಿಸಿದರು.
‘ಮ್ಯಾರಾಥಾನ್ನಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಈಗಾಗಲೇ 2,500ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆಸಕ್ತರು https://easebuzz.in/quickpay/miiniiuogn ಲಿಂಕ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಭಾಗವಹಿಸುವವರಿಗೆ ಟೀ ಶರ್ಟ್, ಕ್ಯಾಪ್ ಹಾಗೂ ಪ್ರಮಾಣಪತ್ರ ನೀಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮ್ಯಾರಾಥಾನ್ನ ಟೀ ಶರ್ಟ್ ಮತ್ತು ಕ್ಯಾಪ್ ಅನ್ನು ಅಶೋಕ ಶೆಟ್ಟರ್, ಪ್ರಾಚಾರ್ಯ ಪಿ.ಜಿ. ತಿವಾರಿ, ಕಾರ್ಯನಿರ್ವಾಹಕ ಡೀನ್ ಬಿ.ಎಲ್. ದೇಸಾಯಿ, ಕಾಲೇಜಜಿನ ಸಾಂಸ್ಕೃತಿಕ ಕಾರ್ಯದರ್ಶಿ ಪ್ರಣತಿ ಎ.ಎಸ್, ಹಣಕಾಸು ಕಾರ್ಯದರ್ಶಿ ನಿಶತ್ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್ ಸಂಜಯ್ ಕೊಟಬಾಗಿ ಬಿಡುಗಡೆ ಮಾಡಿದರು.
