Breaking News

ನಾಳೆಯಿಂದ ಮಳೆಗಾಲದ ಅಧಿವೇಶನ, ಮತಾಂತರ ನಿಷೇಧ ವಿಧೇಯಕ ಸೇರಿದಂತೆ ವಿವಿಧ ವಿಧೇಯಕಗಳು ಮಂಡನೆ

Spread the love

ಬೆಂಗಳೂರು : ನಾಳೆಯಿಂದ 10 ದಿನಗಳ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಸದನ ಕಲಹ ನಡೆಯಲಿದ್ದು ಮೂರು ಪ್ರಮುಖ ಪಕ್ಷಗಳಿಗೆ ಈಗಾಗಲೇ 2023ರ ಚುನಾವಣೆ ಕಾವು ಮುಟ್ಟಿದ್ದು, ನಾಳೆಯಿಂದ ಸೆ.23ರ ತನಕ ನಡೆಯಲಿರುವ ಮಳೆಗಾಲದ ವಿಧಾನಮಂಡಲ ಅಧಿವೇಶನ ಪರಸ್ಪರ ಆರೋಪ-ಪ್ರತ್ಯಾರೋಪ, ಏಟು-ಎಿದುರೇಟು ನೀಡಲು ವೇದಿಕೆಯಾಗಿ ಪರಿಣಮಿಸಲಿದೆ.
ಇತ್ತ ಪ್ರತಿಪಕ್ಷಗಳು ಸರ್ಕಾರಕ್ಕೆ ಬೆಂಗಳೂರು ಮಳೆ ಅನಾಹುತ, ಕಮಿಷನ್ ಆರೋಪ, ನೇಮಕಾತಿ ಅಕ್ರಮಗಳು, ಕಾನೂನು ಸುವ್ಯವಸ್ಥೆ, ನೆರೆ ಹಾನಿ ಪರಿಹಾರ ಪಾವತಿ ಸಂಬಂಧ ಬಿಸಿ ಮುಟ್ಟಿಸಲು ಎಲ್ಲಾ ತಯಾರಿಗಳನ್ನು ನಡೆಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈ ವಿಚಾರಗಳನ್ನು ಮುಂದಿಟ್ಟುಕೊಂಡು ಬೊಮ್ಮಾಯಿ ಸರ್ಕಾರವನ್ನು ತಿವಿಯಲು ಸಿದ್ಧವಾಗಿವೆ.10 ದಿನಗಳ ಮಳೆಗಾಲದ ಅಧಿವೇಶನ : ಇತ್ತ ಪ್ರತಿಪಕ್ಷಗಳು ಮುಟ್ಟಿಸಲಿರುವ ಬಿಸಿ ತಣ್ಣಗಾಗಿಸಲು ಆಡಳಿತ ಪಕ್ಷವೂ ಸನ್ನದ್ಧವಾಗಿದೆ. ಸರ್ಕಾರದ ಅಭಿವೃದ್ಧಿ ಕೆಲಸ, ಸಾಧನೆ, ನೆರೆ ಪರಿಹಾರ ಸಂಬಂಧ ಸಮರ್ಥವಾಗಿ ಉತ್ತರಿಸಲು ತಯಾರಿ ನಡೆಸಿದೆ. ಪ್ರತಿಪಕ್ಷಗಳ ತಂತ್ರಗಾರಿಕೆಗೆ ಪ್ರತಿ ತಂತ್ರಗಾರಿಕೆಯನ್ನೂ ಬಿಜೆಪಿ ಹೆಣೆದುಕೊಂಡಿದೆ. ಮುಖ್ಯವಾಗಿ ಕಾಂಗ್ರೆಸ್ ಆಡಳಿತಾವಧಿಯ ಅಕ್ರಮಗಳು, ವೈಫಲ್ಯಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಪ್ರತಿಪಕ್ಷದ ಏಟಿಗೆ ಎದುರೇಟು ನೀಡಲು ಬೊಮ್ಮಾಯಿ ಸರ್ಕಾರವೂ ಸಿದ್ಧವಾಗಿದೆ.
ಬಿಜೆಪಿ ಪ್ರಮುಖವಾಗಿ ಪ್ರತಿಪಕ್ಷದ ಭ್ರಷ್ಟಾಚಾರದ ಅಸ್ತ್ರಕ್ಕೆ ಕೊಳವೆ ಬಾವಿ ಅವ್ಯವಹಾರ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಅಕ್ರಮ, ವಿದ್ಯುತ್ ಇಲಾಖೆಯಿಂದ ಮೀಟರ್ ಅಳವಡಿಕೆ ವಿಚಾರ, ಪೊಲೀಸ್ ಪೇದೆ ಹಾಗೂ ಶಿಕ್ಷಕರ ನೇಮಕದಲ್ಲಿ ಗೋಲ್‌ಮಾಲ್, ವಿದ್ಯುತ್ ಖರೀದಿ ಒಪ್ಪಂದ, ಸೋಲಾರ್ ಘಟಕಗಳ ಹಂಚಿಕೆ ಹಗರಣ, ಅರ್ಕಾವತಿ ರೀಡು ಪ್ರಕರಣಕ್ಕೆ ಸಂಬಂಧಿಸಿದ ನ್ಯಾ.ಕೆಂಪಣ್ಣ ಆಯೋಗದ ವರದಿ,ಬೆಂಗಳೂರಿನಲ್ಲಿ ಮಳೆ ಅವಾಂತರದ ಕಾರಣಗಳು, ಒತ್ತುವರಿ ತೆರವಿನ ದಾಖಲೆಗಳನ್ನು ಮಂಡಿಸಿ ಪ್ರತ್ಯಸ್ತ್ರ ಹೂಡಲು ಸಜ್ಜಾಗಿದೆ. ಆ ಮೂಲಕ ಅಧಿವೇಶನ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವಿನ ಮಾತಿನ ಮಲ್ಲಯುದ್ಧಕ್ಕೆ ಸಾಕ್ಷಿಯಾಗಲಿದೆ.ಮತಾಂತರ ನಿಷೇಧ ವಿಧೇಯಕ ಸೇರಿ ಪ್ರಮುಖ ನಾಳೆಯಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಸುಗ್ರೀವಾಜ್ಞೆ ರೂಪದಲ್ಲಿ ಜಾರಿಗೆ ಬಂದಿರುವ ಮತಾಂತರ ನಿಷೇಧ ಕಾನೂನು ಮಂಡನೆಯಾಗಲಿದೆ. ವಿಧಾನಪರಿಷತ್ ನಲ್ಲಿ ಮಂಡನೆಯಾಗದೇ ಹಾಗೇ ಉಳಿದುಕೊಂಡಿದ್ದ ಬಲವಂತದ ಮತಾಂತರ ನಿರ್ಬಂಧಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ಇದೇ ಮೇನಲ್ಲಿ ಆಧ್ಯಾದೇಶ ಮೂಲಕ ಜಾರಿಗೆ ತರಲಾಗಿತ್ತು. ಇದೀಗ ಈ ಅಧಿವೇಶನದಲ್ಲಿ ವಿಧೇಯಕವನ್ನು ಉಭಯ ಸದನದಲ್ಲಿ ಮಂಡಿಸಿ ಕಾಯ್ದೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಭೂಮಿ ಕಬಳಿಕೆ ಆರೋಪದಡಿ ಗ್ರಾಮೀಣ ಪ್ರದೇಶದ ಜನತೆಯ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸದೆ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗುವಂತೆ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ತಿದ್ದುಪಡಿ ವಿಧೇಯಕ ಮಂಡನೆ ಯಾಗಲಿದೆ.ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಜನಸಂಖ್ಯೆ ನಿಗದಿಗೊಳಿಸುವ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ಕಾಯ್ದೆ-2022 ಮರು ತಿದ್ದುಪಡಿ ವಿಧೇಯಕ ಅಧಿವೇಶನದಲ್ಲಿ ಮಂಡಿಸಲಾಗುವುದು. ಈಗಾಗಲೇ ತಿದ್ದುಪಡಿ ಕಾಯ್ದೆಯ ಸೆಕ್ಷನ್‌ 121 ಮತ್ತು ಸೆಕ್ಷನ್‌ 160ರ ತಿದ್ದುಪಡಿಗೆ ಸುಗ್ರೀವಾಜ್ಞೆ ತರಲಾಗಿದೆ. ಈ‌ ಮರುತಿದ್ದುಪಡಿ ವಿಧೇಯಕವನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು.
ಕರ್ನಾಟಕ ರೇಷ್ಮೆ ಹುಳುವಿನ ಬಿತ್ತನೆ, ಗೂಡು ಮತ್ತು ರೇಷ್ಮೆ ನೂಲು (ಉತ್ಪಾದನೆ, ಸರಬರಾಜು, ಹಂಚಿಕೆ ಮತ್ತು ಮಾರಾಟ’ ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2022ವೂ ಉಭಯ ಸದನಗಳಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


Spread the love

About Karnataka Junction

[ajax_load_more]

Check Also

ರಾಜ್ಯ ಬಜೆಟ್ ಮಂಡನೆಗೆ ಸಲಹೆ ಗಳು

Spread the love ಹುಬ್ಬಳ್ಳಿ: ಈ ರಾಜ್ಯದ ಮುಖ್ಯ ಮಂತ್ರಿ ಯಾಗಿ ಹಣಕಾಸು ಸಚಿವ ರಾಗಿ ಈ ಬಾರಿ 16 …

Leave a Reply

error: Content is protected !!