ಚಿತ್ರದುರ್ಗ: ಮುರುಘಾ ಮಠದ ಹಾಸ್ಟೆಲ್ನ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂ ಧಿಸಿದಂತೆ ಮುರುಘಾ ಮಠದ ಶಿವಮೂರ್ತಿ ಶ್ರೀಯನ್ನು ಚಿತ್ರದುರ್ಗದ ಪೊಲೀಸರು ಬಂಧನ ಮಾಡಿದ್ದಾರೆ.
ಚಿತ್ರದುರ್ಗದಲ್ಲಿರುವ ಮುರುಘಾ ಮಠ ದಲ್ಲಿಯೇ ಇದ್ದಾಗ ಗುರುವಾರ ರಾತ್ರಿ ಮಠಕ್ಕೆ ದಾಳಿ ನಡೆಸಿದ ಪೊಲೀಸರು ಪೋಕ್ಸೋ ಕಾಯ್ದೆಯಡಿ ಮುರುಘಾ ಶ್ರೀಯನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಶುಕ್ರವಾರ ಮುರುಘಾ ಶ್ರೀ ವಿರುದ್ಧ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ದೂರು ದಾಖಲಾಗಿತ್ತು. ಇದೀಗ ಏಳು ದಿನದ ಬಳಿಕ ಮುರುಘಾ ಶ್ರೀಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸರು ಮುರುಘಾ ಶ್ರೀಯನ್ನು ಅಜ್ಞಾತ ಸ್ಥಳದಿಂದ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಎಸ್ ಪಿ ಪರಶುರಾಮ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತದೆ.
ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯರು ಏಳು ದಿನಗಳ ಹಿಂದೆ ದೂರು ದಾಖಲಿಸಿದ್ದರು. ಮುರುಘಾ ಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗುತ್ತಿದ್ದಂತೆ ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಅಲ್ಲದೇ ಮುರುಘಾ ಶ್ರೀಯ ಬಂಧನಕ್ಕೆ ವ್ಯಾಪಕ ಒತ್ತಡ ಕೇಳಿಬಂದರೆ, ಮತ್ತೊಂದೆಡೆ ಮಠದ ಭಕ್ತರು ಮತ್ತು ಅನೇಕ ಮಠಾಧೀಶರು ಮುರುಘಾ ಶ್ರೀಯ ಲಾಭಿ ನಡೆಸಿದ್ದರು.
ಪೊಲೀಸರ ಬಂಧನಕ್ಕೂ ಮುನ್ನ ಮುರುಘಾ ಶ್ರೀ ಕಾವಿ ಬಣ್ಣದ ವಸ್ತ್ರದ ಮೇಳೆ ಬಿಳಿ ಬಣ್ಣದ ವಸ್ತ್ರ ಹೊದ್ದಿರೋದು ಪೊಲೀಸ್ ಜೀಪ್ ಹತ್ತುವ ವೇಳೆ ಕಂಡುಬಂದಿದೆ.
ಮಠದ ಸುತ್ತಲೂ ಹೈ ಅಲರ್ಟ್:
ಗುರುವಾರ ಬೆಳಗ್ಗೆಯಿಂದಲೂ ಮುರುಘಾ ಮಠದಲ್ಲಿ ಪೊಲೀಸ್ ಸರ್ಪಗಾವಲಿಲು ಹೆಚ್ಚಿಸಲಾಗಿದ್ದು, ಹಗಲು ಹೊತ್ತಿನಲ್ಲಿ ಮುರುಘಾ ಶ್ರೀಯನ್ನು ಬಂಧಿಸಿದರೆ, ಶ್ರೀಯ ಅಭಿಮಾನಿಗಳಿಂದ ಪರಿಸ್ಥಿತಿ ಹದಗೆಡಬಹುದು ಎಂಬ ಮುಂಜಾಗರೂಕತೆಯಿಂದಾಗಿ ರಾತ್ರಿ ಹೊತ್ತಿನಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗ್ತಿದೆ.
ಅಪ್ರಾಪ್ತ ವಯಸ್ಸಿನ ಹೆಣ್ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ಮಾತ್ರವಲ್ಲದೇ ಹೆಚ್ಚುವರಿ ಪ್ರಕರಣವೂ ದಾಖಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಬಾಲಕಿಯರ ಪೈಕಿ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿಯೂ ಇದ್ದ ಕಾರಣ ಮುರುಘಾ ಶ್ರೀ ವಿರುದ್ಧ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದೆ. ಹೀಗಾಗಿ ಹೆಚ್ಚುವರಿ ಕೇಸ್ನಿಂದ ಎ1 ಆರೋಪಿ ಮುರುಘಾ ಶ್ರೀಗೆ ಮತ್ತಷ್ಟು ಆತಂಕ ಹೆಚ್ಚಾಗಿದೆ.
ನಿರಂತರ ಹೋರಾಟಕ್ಕೆ ಸಿಕ್ಕಿರುವ ಸಣ್ಣ ಜಯವಷ್ಟೇ ಪರಶುರಾಮ:
ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿರುವುದು ನಿರಂತರ ಹೋರಾಟಕ್ಕೆ ಸಿಕ್ಕಿರುವ ಸಣ್ಣ ಜಯವಷ್ಟೆ’ ಎಂದು ಇಲ್ಲಿನ ಒಡನಾಡಿ ಸಂಸ್ಥೆಯ ಸಂಚಾಲಕ ಪರಶುರಾಂ ಪ್ರತಿಕ್ರಿಯಿಸಿದರು. ಈ ಕುರಿತು ಮಾತನಾಡಿದ ಅವರು, ‘ಇಬ್ಬರು ವಿದ್ಯಾರ್ಥಿನಿಯರಷ್ಟೆ ದೌರ್ಜನ್ಯಕ್ಕೆ ಒಳಗಾಗಿಲ್ಲ. ಆ ಮಠದ ವಸತಿನಿಲಯದಲ್ಲಿನ ಬಹಳಷ್ಟು ವಿದ್ಯಾರ್ಥಿನಿಯರು ಶೋಷಣೆಗೆ ಒಳಗಾಗಿದ್ದಾರೆ. ಅವರೂ ನೊಂದಿದ್ದಾರೆ; ನಲುಗಿದ್ದಾರೆ. ಹೀಗಾಗಿ, ಪ್ರಕರಣದ ಬಗ್ಗೆ ನ್ಯಾಯಾಂಗದ ಸುಪರ್ದಿಯಲ್ಲಿ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ಮಕ್ಕಳ ಪರವಾಗಿ ನಿರಂತರವಾಗಿ ಕೆಲಸ ಮಾಡಿದ ಪ್ರಯುಕ್ತ ತಡವಾದರೂ ಆರೋಪಿಯನ್ನು ಬಂಧಿಸಲಾಗಿದೆ. ತ್ವರಿತವಾಗಿ ಕ್ರಮ ಕೈಗೊಂಡಿದ್ದಲ್ಲಿ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಹೆಚ್ಚಿನ ಗೌರವ ಬರುತ್ತಿತ್ತು’ ಎಂದರು.
‘ಮುರುಘಾ ಮಠದಿಂದ ಹೊರಹೊಮ್ಮಿದ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳು ಬಲಿಷ್ಠ ಮಠದ ಸ್ವಾಮೀಜಿಯನ್ನು ರಕ್ಷಿಸಲಿಕ್ಕೇ ನಿಂತರೇ ಹೊರತು ದಿಕ್ಕಿಲ್ಲದವರ, ಬಡವರ ಹಾಗೂ ನೊಂದವರ ಪರವಾಗಿ ನಿಲ್ಲಲಿಲ್ಲ. ಇದು ನೊಂದವರಿಗೆ ಮಾಡಿದ ಅವಮಾನವಲ್ಲದೇ ಮತ್ತೇನೂ ಅಲ್ಲ’ ಎಂದು ತಿಳಿಸಿದರು.
ಶ್ರೀಗಳ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣವನ್ನು ಒಡನಾಡಿ ಸಂಸ್ಥೆ ಬೆಳಕಿಗೆ ತಂದಿತ್ತು.