ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಈಗ ಮತ್ತೇ ಕ್ರಿಕೆಟ್ ಕಲರವ ಮೊಳಕೆ ಒಡೆದಿದ್ದು, ಸುಮಾರು 3 ವರ್ಷಗಳ ಬಳಿಕ ಹುಬ್ಬಳ್ಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಹಂಚಿಕೆಯಾಗಿದ್ದು, ಕ್ರಿಕೆಟ್ ಅಭಿಮಾನಿಗಳ ಖುಷಿ ಮುಗಿಲು ಮುಟ್ಟಿದೆ.
ಹೌದು.. ಸೆಪ್ಟೆಂಬರ್ 8ರಿಂದ 11ರವರೆಗೆ ರಾಜನಗರ ಕೆಎಸ್ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವೆ ಚತುರ್ದಿನ (ಟೆಸ್ಟ್) ಪಂದ್ಯ ನಡೆಯಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಉಭಯ ತಂಡಗಳ ನಡುವಿನ 3 ಚತುರ್ದಿನ ಪಂದ್ಯಗಳನ್ನು ಬೆಂಗಳೂರಿಗೆ ಹಂಚಿಕೆ ಮಾಡಿತ್ತು. ಅದರಲ್ಲಿ 2ನೇ ಚತುರ್ದಿನ ಪಂದ್ಯ ಹುಬ್ಬಳ್ಳಿಗೆ ಲಭ್ಯವಾಗಿದೆ. ಮೊದಲ ಹಾಗೂ 3ನೇ ಚತುರ್ದಿನ ಪಂದ್ಯ ಬೆಂಗಳೂರಿನಲ್ಲಿಯೇ ನಡೆಯಲಿದೆ. ಹುಬ್ಬಳ್ಳಿಯಲ್ಲಿ ಈ ಹಿಂದೆ 2019ರ ಮೇ ತಿಂಗಳಲ್ಲಿ ಭಾರತ-ಶ್ರೀಲಂಕಾ ಎ ತಂಡಗಳ ನಡುವೆ 1 ಚತುರ್ದಿನ ಪಂದ್ಯ ಹಾಗೂ 2 ಏಕದಿನ ಪಂದ್ಯಗಳು ನಡೆದಿದ್ದವು. ಇದಕ್ಕೂ ಮೊದಲು 2017ರಲ್ಲಿ ಭಾರತ-ಬಾಂಗ್ಲಾದೇಶ ಎ ಮಹಿಳಾ ತಂಡಗಳ ನಡುವೆ ಕ್ರಿಕೆಟ್ ಪಂದ್ಯಕ್ಕೆ ಹುಬ್ಬಳ್ಳಿ ಆತಿಥ್ಯ ವಹಿಸಿತ್ತು.
ಹುಬ್ಬಳ್ಳಿಯಲ್ಲಿ 2013ರಲ್ಲಿ ಭಾರತ- ವೆಸ್ಟ್ ಇಂಡೀಸ್ ಎ ತಂಡಗಳ ನಡುವೆ ಮೊದಲ ಬಾರಿ ಆಯೋಜನೆಯಾಗಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆಗ ಖ್ಯಾತನಾಮ ಆಟಗಾರರಾದ ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ, ಜಹೀರ ಖಾನ್ ಆಡಿದ್ದರು. ಈಗ ಭಾರತ ಟೆಸ್ಟ್ ತಂಡದಲ್ಲಿರುವ ಚೇತೇಶ್ವರ ಪೂಜಾರ ಈ ಮೈದಾನದಲ್ಲಿ ಅಜೇಯ ತ್ರಿಶತಕ ಬಾರಿಸಿದ್ದು, ಕ್ರಿಕೆಟ್ ಪ್ರೇಮಿಗಳ ನೆನಪಿನಲ್ಲಿ ಉಳಿದಿದೆ. ಈ ಬಾರಿ ಋತುರಾಜ ಗಾಯಕವಾಡ, ಪ್ರಸಿದ್ಧ ಕೃಷ್ಣ, ರಾಹುಲ ಚಹ, ಕುಲದೀಪ ಯಾದವ, ಉಮ್ರಾನ್ ಮಲ್ಲಿಕ್ ಅವರಂಥ ಅಂತಾರಾಷ್ಟ್ರೀಯ ಆಟಗಾರರು ಭಾರತ ಎ ತಂಡದಲ್ಲಿ ಇದ್ದಾರೆ. ಕಳೆದ 3 ವರ್ಷಗಳಿಂದ ಹುಬ್ಬಳ್ಳಿ ರಾಜನಗರ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿರಲಿ, ದೇಶೀಯ ಕ್ರಿಕೆಟ್ (ರಣಜಿ) ಪಂದ್ಯಗಳೂ ನಡೆದಿಲ್ಲ. ಇದೀಗ ಕೆಎಸ್ಸಿಎ ಅರ್ಜನ್ ಎನ್. ಆಯೋಜಿಸಿರುವ ಮಹಾರಾಜ ಟ್ರೋಫಿ ಟ್ವೆಂಟಿ-20 ಕ್ರಿಕೆಟ್ ಪಂದ್ಯವು ಮಳೆಯ ಕಾರಣಕ್ಕೆ ಹುಬ್ಬಳ್ಳಿಗೆ ಹಂಚಿಕೆಯಾಗಿರಲಿಲ್ಲ. ಇದೀಗ ಭಾರತ-ನ್ಯೂಜಿಲೆಂಡ್ ಎ ತಂಡಗಳ ನಡುವಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಹಂಚಿಕೆ ಆಗಿರುವುದು ಇಲ್ಲಿಯ ಕ್ರಿಕೆಟ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.