ಕೊಪ್ಪಳ : ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಉದ್ದ ತೋಳಿನ ಅಂಗಿ ಹಾಕಿಕೊಂಡು ಬಂದಿದ್ದ ಅಭ್ಯರ್ಥಿಗಳಿಗೆ ಪರೀಕ್ಷಾ ಸಿಬ್ಬಂದಿ ತೋಳು ಕತ್ತರಿಸುವ ಮೂಲಕ ಶಾಕ್ ನೀಡಿದ್ದಾರೆ.
ರಾಜ್ಯಾದ್ಯಂತ ಇಂದು ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆ ನಡೆಯುತ್ತಿದೆ. ಕೊಪ್ಪಳ ತಾಲೂಕಿನ ಭಾಗ್ಯನಗರದ ನವಚೇತನ ಪಬ್ಲಿಕ್ ಶಾಲೆ ಕೇಂದ್ರದಲ್ಲೂ ಪರೀಕ್ಷೆ ನಡೆಯುತತ್ತಿತ್ತು. ಈ ವೇಳೆ ಪರೀಕ್ಷೆಗೆ ಉದ್ದನೆಯ ತೋಳಿನ ಅಂಗಿ ಹಾಕಿ ಬಂದವರನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟಿಲ್ಲ. ಬೇರೆ ಶರ್ಟ್ ಧರಿಸಿ ಬರುವಂತೆ ಸೂಚಿಸಲಾಗಿದೆ.
ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮದಿಂದಾಗಿ ಇತರ ನೇಮಕಾತಿ ಪರೀಕ್ಷೆಗಳಿಗೆ ಕಟ್ಟುನಿಟ್ಟಿನ ಕಟ್ಟಳೆ ವಿಧಿಸಲಾಗಿದೆ. ಜಿಲ್ಲಾದ್ಯಂತ 22 ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆಯುತ್ತಿವೆ.
ದೂರ ದೂರಿಂದ ಬಂದವರಿಗೆ ಬದಲಿ ಶರ್ಟ್ ಇಲ್ಲದಿದ್ದರೆ, ತೋಳು ಕತ್ತರಿಸಿಕೊಂಡು ಒಳಬರುವಂತೆ ತಿಳಿಸಿದ್ದಾರೆ. ಇಲ್ಲದಿದ್ದರೆ ಒಳ ಬಿಡುವುದಿಲ್ಲವೆಂದು ನಿಷೇಧ ಹೇರಿದ್ದಾರೆ. ಅನಿವಾರ್ಯವಾಗಿ ಅಭ್ಯರ್ಥಿಗಳ ತೋಳನ್ನು ಸಿಬ್ಬಂದಿ ಕತ್ತರಿಸಿ ಒಳಗೆ ಕಳುಹಿಸಿದ್ದಾರೆ . ಕೆಲವರು ಬೇರೆ ಅಂಗಿ ಖರೀದಿಸಿ ಧರಿಸಿ ಪರೀಕ್ಷೆಗೆ ಹಾಜರಾಗಿದ್ದಾರೆ.