ನವದೆಹಲಿ : ದೇಶದ ೧೫ ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಪದಗ್ರಹಣ ಮಾಡಿದ ಬೆನ್ನಲ್ಲೆ ನಾಳೆ ನೂತನ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿರುವ ಜಗದೀಪ್ ಧನ್ಕರ್ ಹಾಗೂ ಯುಪಿಎ ಅಭ್ಯರ್ಥಿ ಮಾರ್ಗರೇಟ್ ಆಳ್ವ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಹಾಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರ ಅವಧಿ ಈ ತಿಂಗಳ ೧೦ ರಂದು ಮುಗಿಯಲಿದ್ದು, ಹೀಗಾಗಿ ನೂತನ ಉಪರಾಷ್ಟ್ರಪತಿಗಳ ಆಯ್ಕೆಗೆ ನಾಳೆ ಮತದಾನ ನಡೆಯಲಿದೆ. ನಾಳಿನ ಉಪರಾಷ್ಟ್ರಪತಿ ಚುನಾವಣೆಯ ಮತದಾನಕ್ಕೆ ದೆಹಲಿಯ ಸಂಸತ್ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಉಪರಾಷ್ಟ್ರಪತಿ ಚುನಾವಣೆಗೆ ರಾಜ್ಯಸಭೆ, ಲೋಕಸಭೆಯ ಸದಸ್ಯರು ಮತದಾರರಾಗಿದ್ದು, ರಾಜ್ಯಸಭೆಯ ೨೩೩ ಚುನಾಯಿತ ಸದಸ್ಯರು, ೧೨ ನಾಮಕರಣ ಸದಸ್ಯರು, ಲೋಕಸಭೆಯ ೫೪೩ ಚುನಾಯಿತ ಸದಸ್ಯರೂ ಸೇರಿದಂತೆ ಒಟ್ಟು ೭೮೮ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ.
ನಾಳಿನ ಉಪರಾಷ್ಟ್ರಪತಿ ಚುನಾವಣೆ ಬೆಳಿಗ್ಗೆ ೧೦ಕ್ಕೆ ಆರಂಭವಾಗಲಿದ್ದು, ಸಂಜೆ ೪ ಗಂಟೆಗೆ ಮತದಾನ ಮುಗಿಯುತ್ತಿದ್ದಂತೆಯೇ ಮತ ಎಣಿಕೆ ನಡೆದು ನಾಳೆ ಸಂಜೆಯ ಹೊತ್ತಿಗೆ ಫಲಿತಾಂಶ ಹೊರ ಬೀಳಲಿದೆ.