ಬಾಗಲಕೋಟೆ: ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಸಿದರು ಅಂತಾರಲ್ಲಾ ಇದಕ್ಕೆ ಅನ್ನಬೇಕು ನೋಡಿ. ಚುನಾವಣೆ ಇನ್ನೂ 9 ತಿಂಗಳು ಬಾಕಿ ಇದೆ.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ನಲ್ಲಿ ದಿನಕ್ಕೆ ಒಬ್ಬರಂತೆ ಉದಯವಾಗುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯೆ ನಡೆಯುತ್ತಿರುವ ಜಟಾಪಟಿ ಜೋರಾಗಿರುವ ಮಧ್ಯೆಯೇ ಈ ರೇಸ್ನಲ್ಲಿ ಇನ್ನೊಬ್ಬರ ಹೆಸರು ಕೇಳಿ ಬಂದಿದೆ. 2023 ರ ವಿಧಾನಸಭಾ ಚುನಾವಣೆಗೆ ಎಸ್ಆರ್ ಪಾಟೀಲ್ ಅವರನ್ನು “ಸಿಎಂ ಅಭ್ಯರ್ಥಿ”ಯಾಗಿ ಘೋಷಿಸಬೇಕು.
ಅವರು ಆದರ್ಶ ಸಿಎಂ ಆಗಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿಕೆ ನೀಡಿರುವುದು ಕಾಂಗ್ರೆಸ್ನಲ್ಲಿ ಮತ್ತೊಂದು ಸುತ್ತಿನ ತಿಕ್ಕಾಟಕ್ಕೆ ಕಾರಣವಾಗಿದೆ. ಎಸ್.ಆರ್. ಪಾಟೀಲ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೀರಪ್ಪ ಮೊಯ್ಲಿ ಅವರು ಮಾತನಾಡಿ, “ಮುಂದಿನ ಸಿಎಂ ಆಗಲು ಎಸ್.ಆರ್. ಪಾಟೀಲ್ ಅವರು ಯೋಗ್ಯರು ಮತ್ತು ಆದರ್ಶ ನಾಯಕರಾಗಿದ್ದಾರೆ. ಅವರನ್ನು ಈ ಹಿಂದೆ ನಾನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲು ಸೂಚಿಸಿದ್ದೆ” ಎಂದು ಹೇಳಿಕೆ ನೀಡಿದ್ದಾರೆ.
ಇದು ಕಾಂಗ್ರೆಸ್ನಲ್ಲಿ ಕುದಿ ಉಂಟು ಮಾಡಿದೆ. ಈಗಾಗಲೇ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಮಧ್ಯೆ ಸಿಎಂ ಕಾದಾಟ ನಡೆಯುತ್ತಿದೆ. ಇದೀಗ ಮೊಯ್ಲಿ ಅವರ ಹೇಳಿಕೆಯಿಂದ ಎಸ್.ಆರ್ ಪಾಟೀಲ್ ಅವರು ಕೂಡ ಕಣಕ್ಕಿಳಿದಂತಾಗಿದೆ.ಡಿಕೆಶಿ ಪ್ರತಿಕ್ರಿಯೆ: ವೀರಪ್ಪ ಮೊಯ್ಲಿ ಅವರ ಎಸ್ಆರ್ ಪಾಟೀಲ್ ಸೂಕ್ತ ಸಿಎಂ ಹೇಳಿಕೆ ಬಗ್ಗೆ ಮಾಧ್ಯಮಗಳು ಕೆಪಿಸಿಸಿ ಅಧ್ಯಕ್ಷರ ಬಳಿ ಪ್ರಶ್ನಿಸಿದಾಗ, ಉತ್ತರ ನೀಡಲು ನಿರಾಕರಿಸಿ ಈ ಬಗ್ಗೆ ಮೊಯ್ಲಿ ಅವರನ್ನೇ ಕೇಳಿ ಎಂದು ಹೇಳಿದರು.
