ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವ ಅಮೃತ್ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ರೈಲ್ವೆ ರಕ್ಷಣಾ ದಳದ ಬೈಕ್ ರ್ಯಾಲಿ ನಡೆಸಲಾಗುತ್ತಿದೆ ಎಂದು ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡ್ ಹೇಳಿದರು.
ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಎದುರು ಶುಕ್ರವಾರ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬೈಕ್ ರ್ಯಾಲಿಯು ವಿಭಾಗೀಯ ವ್ಯಾಪ್ತಿಯ 25 ಸ್ಥಳಗಳಿಗೆ ಭೇಟಿ ನೀಡಿ ಜನರಲ್ಲಿ ಸ್ವಾತಂತ್ರ್ಯೋತ್ಸವ ಅಮೃತ್ ಮಹೋತ್ಸವದ ಕುರಿತು ಜಾಗೃತಿ ನೀಡಲಾಗುತ್ತದೆ. ಬೈಕ್ ರ್ಯಾಲಿಯ ತಂಡದಲ್ಲಿ 10 ಮಂದಿಯ ತಂಡವಿದ್ದು, 75ನೇ ವರ್ಷವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಇದಾಗಿದೆ ಎಂದು ಹೇಳಿದರು.
ತಂಡವೂ ಧಾರವಾಡ, ಖಾನಾಪುರ, ಅಳ್ಳಾವರ, ಬೆಳಗಾವಿ, ಗದಗ, ಹೊಸಪೇಟೆ, ಬಳ್ಳಾರಿ, ಬಾಗಲಕೋಟೆ, ಎಲವಗಿ ಸೇರಿದಂತೆ ವಿವಿಧ ಕಡೆಗೆ ರ್ಯಾಲಿ ಸಂಚರಿಲಿದೆ. ಆಗಸ್ಟ್ 15 ರಂದು ನವದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲಿದೆ ಎಂದು ಹೇಳಿದರು.
ರೈಲ್ವೆ ವಿಭಾಗೀಯ ಭದ್ರತಾ ಆಯುಕ್ತ ಜೀತೇಂದ್ರ ಕುಮಾರ್ ಶರ್ಮಾ, ಸಹಾಯಕ ಭದ್ರತಾ ಆಯುಕ್ತ ಎನ್. ಜಯಪ್ರಕಾಶ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ವಿಶ್ವಾಸ್ ಕುಮಾರ್, ಸಂತೋಷ ಕುಮಾರ್ ವರ್ಮಾ, ಮುಖ್ಯ ವೈದ್ಯಕೀಯ ಅಧೀಕ್ಷಕಿ ಡಾ. ಉಷಾ ರಾಣಿ ಮುಂತಾದವರು ಇದ್ದರು.
