ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೇ 30ರಂದು ನಗರಕ್ಕೆ ಭೇಟಿ ನೀಡಿದ್ದಾಗ ಹೆಚ್ಚಿನ ಕಾರ್ಯಕರ್ತರು ಜಮಾಯಿಸಿ, ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ₹10 ಸಾವಿರ ದಂಡ ವಿಧಿಸಿದ್ದಾರೆ. ಒಂದೇ ಕಾರ್ಯಕ್ರಮದಲ್ಲಿ ನಡೆದ ಉಲ್ಲಂಘನೆಗೆ ಒಮ್ಮೆ ₹2 ಸಾವಿರ, ಮತ್ತೊಮ್ಮೆ ₹8 ಸಾವಿರ ದಂಡ ವಿಧಿಸಿರುವುದಕ್ಕೆ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಸೇರಿದಂತೆ ಹೆಚ್ಚಿನ ಕಾರ್ಯಕರ್ತರು ಅಂತರ ಕಾಯ್ದುಕೊಳ್ಳದೆ ಜಮಾಯಿಸಿದ್ದರು. ₹2 ಸಾವಿರ ದಂಡ ವಿಧಿಸಲಾಗಿತ್ತು. ಅವರಿಗೆ ಸ್ವಾಗತ ಕೋರಲು ರಸ್ತೆಯಲ್ಲಿ ನಿಯಮಬಾಹಿರವಾಗಿ ಬ್ಯಾನರ್ ಹಾಗೂ ಬಂಟಿಂಗ್ಸ್ಗಳನ್ನು ಹಾಕಿದ್ದಕ್ಕಾಗಿ ₹8 ಸಾವಿರ ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.
ಬಿಜೆಪಿ ಆಣತಿಯಂತೆ ದಂಡ: ‘ಪಾಲಿಕೆ ಅಧಿಕಾರಿಗಳು ಬಿಜೆಪಿ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಮೊದಲು ₹2 ಸಾವಿರ ದಂಡ ಹಾಕಿ, ನಂತರ ಮತ್ತೆ ₹8 ಸಾವಿರ ದಂಡ ವಿಧಿಸಿದ್ದಾರೆ. ಇದು ಅಧಿಕಾರಿಗಳ ಇಬ್ಬಗೆಯ ನೀತಿಗೆ ಸಾಕ್ಷಿಯಾಗಿದೆ. ನಗರದಲ್ಲಿ ಸಚಿವರು ನಡೆಸುವ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗುತ್ತಿರುತ್ತದೆ. ಆಗ, ಅಧಿಕಾರಿಗಳು ಎಲ್ಲಿ ಹೋಗಿರುತ್ತಾರೆ’ ಎಂದು ದಂಡ ಪಾವತಿಸಿರುವ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಪ್ರಶ್ನಿಸಿದರು.
