ಬೆಂಗಳೂರು;ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನು ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಸದಸ್ಯರು ಮತ್ತು ಸಹ ಸದಸ್ಯರಿಗೆ ವಿಸ್ತರಿಸುವಂತೆ ಕೋರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ. ಪಿ.ಎಸ್. ಹರ್ಷ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಲಾಯಿತು.
ವಾರ್ತಾ ಸೌಧದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರ ಸಹಕಾರ ಸಂಘದ ಅಧ್ಯಕ ರಾಘವೇಂದ್ರ ಕೆ. ತೊಗರ್ಸಿ ನೇತೃತ್ವದ ನಿಯೋಗ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಹರ್ಷ ಅವರು, ಸಂಘದ ಮನವಿ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ಅವರು, ಯಶಸ್ವಿನಿ ಯೋಜನೆಯು ಸಂಘದ ಸದಸ್ಯ ಹಾಗೂ ಸಹ ಸದಸ್ಯರಿಗೆ ಅನ್ವಯವಾಗದಿರುವ ಹಿನ್ನೆಲೆಯಲ್ಲಿ, ಪರ್ಯಾಯವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ನೆರವನ್ನು ದೊರಕಿಸಿಕೊಡುವಂತೆ ಆಯುಕ್ತರನ್ನು ಕೋರಿದರು.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ವೃತ್ತಿನಿರತ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದು. ಕಳೆದ 73 ವರ್ಷಗಳಿಂದ ಸದಸ್ಯರಿಗೆ ಆರ್ಥಿಕ ಬೆಂಬಲ ನೀಡುತ್ತಾ ಬಂದಿದೆ. ಸದಾ ಗಡುವಿನೊಳಗೆ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆಯುಳ್ಳ ಸಮಾಜಮುಖಿ ವೃತ್ತಿಯನ್ನೇ ಜೀವನಾಧಾರವಾಗಿ ಮಾಡಿಕೊಂಡಿರುವ ಪತ್ರಕರ್ತರು ಮತ್ತು ದಿನನಿತ್ಯ ಭರಪೂರ ಸುದ್ದಿ ಪೂರೈಸಲು ಪತ್ರಕರ್ತರಷ್ಟೇ ಮಹತ್ವದ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತೇತರರಾದ ಸಂಘದ ಸಹ ಸದಸ್ಯರಿಗೆ ಈ ಯೋಜನೆಯು ಬಹಳ ಉಪಕಾರಿಯಾಗಬಲ್ಲದು ಎಂಬ ಆಶಯದಿಂದ ಮನವಿ ಮಾಡಿರುವ ಸಂಘ, ಸಹಾನುಭೂತಿಯಿಂದ ಪರಿಗಣಿಸುವಂತೆ ಸರ್ಕಾರವನ್ನು ಕೋರಿದೆ.
ಈ ಯೋಜನೆಯನ್ನು ಸಂಘದ ಸದಸ್ಯ-ಸಹ ಸದಸ್ಯರಿಗೂ ವಿಸ್ತರಿಸುವ ಮೂಲಕ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗದ ಆಧಾರ ಸ್ಥಂಭಗಳಾದ ಪತ್ರಕರ್ತರ ಸಂಸ್ಥೆಯನ್ನು ಮತ್ತಷ್ಟು ಬಲಗೊಳಿಸಬೇಕೆಂದು ಸಂಘ ಸರ್ಕಾರವನ್ನು ಕೋರಿದೆ.
