ಹುಬ್ಬಳ್ಳಿ: ಸಿರಿಕನ್ನಡ ವಾಹಿನಿ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಸೊಗಡು ಇರುವ ʼಧಾರವಾಡದಾಗೊಂದು ಲವ್ ಸ್ಟೋರಿʼ ಧಾರಾವಾಹಿ ನಿರ್ಮಿಸಿದ್ದು, ಏ. 19ರಂದು ಸಂಜೆ 7ಕ್ಕೆ ಪ್ರಸಾರವಾಗಲಿದೆ ಎಂದು ನಿರ್ದೇಶಕ ಪ್ರಥ್ವಿರಾಜ್ ಕುಲಕರ್ಣಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರಮಠ, ಸಿದ್ಧಾರೂಢಮಠ, ನೃತಪತುಂಗ ಬೆಟ್ಟ, ಕಾಮಧೇನು ಗ್ರಾಮ, ಇಟಗಟ್ಟಿ ಗ್ರಾಮದ ವಾಡೆ, ಬೂದನಗುಡ್ಡದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ 35 ಕಂತುಗಳು ಪೂರ್ಣಗೊಂಡಿದ್ದು, ಉಳಿದ 30 ಕಂತುಗಳ ಚಿತ್ರೀಕರಣ ಮೇ 1ರಂದು ಆರಂಭಿಸಲಾಗುವುದು ಎಂದರು.
ತ್ರಿಕೋನ ಪ್ರೇಮಕಥೆ ಇರುವ ಕುಟುಂಬದವರೆಲ್ಲ ಕೂತು ನೋಡುವ ಧಾರಾವಾಹಿ ಇದಾಗಿದೆ. ಗಂಭೀರ ಕಥೆಯಿದ್ದು, ಅಲ್ಲಲ್ಲಿ ತಿಳಿಹಾಸ್ಯವಿದೆ. ಸ್ಥಳೀಯ ಕಲಾವಿದರಿಗೆ ಪ್ರಾಧಾನ್ಯತೆ ನೀಡಿರುವುದರಿಂದ ಭಾಷಾ ಪ್ರಯೋಗ ಉತ್ತಮವಾಗಿ ಮೂಡಿಬಂದಿದೆ ಎಂದು ತಿಳಿಸಿದರು.
ನಾಯಕ ನವೀನ್, ನಾಯಕಿ ರೇಷ್ಮಾ, ಹರ್ಷಿತಾ, ಸಂತೋಷ ಬೆಂಗೇರಿ, ನಂದಿನಿ ಹರೀಶ, ಗಿರಿಜಾ ಹಿರೇಮಠ ಅಭಿನಯಿಸಿದ್ದಾರೆ. ಗಾನಶ್ರೀ ಕೋಟ್ಯಾನ ನಿರ್ಮಾಣದಲ್ಲಿ ಜೀ.ವಿ. ಹಿರೇಮಠ ಸಂಭಾಷಣೆ, ಶಿವು ಛಾಯಾಗ್ರಹಣ ಮಾಡಿದ್ದಾರೆ. ಕೃಷ್ಣಪಂತ್ ಮತ್ತು ರಾಘವೇಂದ್ರ ಪಂತ್ ತಾಂತ್ರಿಕ ಸಹಾಯ ನೀಡಿದ್ದಾರೆ ಎಂದರು.
ಸುನಿಲ ಪತ್ರಿ, ವಿಕ್ರಂ ಕುಮಟ, ಪ್ರಿಯಾ ಕುಲಕರ್ಣಿ, ರಾಜ್ ನೀನಾಸಂ ಇದ್ದರು.
![](https://karnatakajunction.com/wp-content/uploads/2022/09/IMG-20210415-WA0019-660x330.jpg)